Sunday, May 10, 2020

ಸಾತ್ವಿಕ ಶ್ರೀ ಚಕ್ರದ ರಚನೆ



ನಮ್ಮೆಲ್ಲರ ಮನೆಗಳಲ್ಲಿ, ದೇವಾಲಯಗಳಲ್ಲಿ ಸಾತ್ವಿಕ ಶ್ರೀ ಚಕ್ರದ ಪೂಜಾನುಷ್ಠಾನ, ಅರ್ಚನೆಗಳು ಈ ದಿನ ಸಾಮಾನ್ಯವಾಗಿ ಕಾಣಸಿಗುತ್ತದೆ. ನಮ್ಮೆಲ್ಲರಿಗೂ ತಿಳಿದಿರುವಂತೆ ಶ್ರೀ ಚಕ್ರದ ಶಕ್ತಿ ಅದ್ಭುತ, ಅದಕ್ಕೆ ದೇವಿಯ ಸ್ವರೂಪಗಳ,  ಸಾಮಾನ್ಯರಿಗೆ ಕೊಡುವ ರಕ್ಷಣೆಗಳ ಹೊರತಾಗಿಯೂ ಅನೇಕ ಅನೇಕ ವಿವರಣೆಗಳನ್ನು ಒಬ್ಬರು ಒಂದೊಂದು ರೀತಿಯಲ್ಲಿ ಈ ಯಂತ್ರವನ್ನು ವಿವರಿಸುತ್ತಾರೆ. ಆದರೆ ನನಗೆ ಈ ಸಾತ್ವಿಕ ಶ್ರೀ ಚಕ್ರವನ್ನು ಶ್ರೀ ಶ್ರೀ ಶಂಕರಾಚಾರ್ಯರು ತಮ್ಮ ಅದಮ್ಯ ಭಕ್ತಿ, ದೈವೀ ಪ್ರೀತಿ, ಬುದ್ಧಿವಂತಿಕೆ, ಪಾಂಡಿತ್ಯದಿಂದ ರಚಿಸಿದ ಕಥೆ ಎಷ್ಟು ಭಾರಿ ಓದಿದರು ರೋಮಾಂಚಕ ಎನಿಸುತ್ತದೆ.

ನನ್ನ ಹಿಂದಿನ ಬರವಣಿಗೆಯಲ್ಲಿ ಮೂಲ ಶ್ರೀ ಚಕ್ರದ ಉದ್ಭವದ ಕುರಿತಾದ ಕಥೆಯನ್ನು ನಿಮ್ಮೊಂದಿಗೆ ಹಂಚಿಕೊಂಡಿದ್ದೆ. ಈ ದಿನ ಸಾತ್ವಿಕ ಶ್ರೀ ಚಕ್ರದ ರಚನೆಯ ಕುರಿತಾದ ಕಥೆಯನ್ನು ಬರೆಯಬೇಕೆಂದು ನೆನೆಸಿದ್ದೇನೆ.

ಶ್ರೀ ಶ್ರೀ ಶಂಕರರಿಗೆ ಶೃಂಗ ಗಿರಿಯಲ್ಲಿದಾಗ  ಮೂಲ ಶ್ರೀ ಚಕ್ರದಿಂದಾಗುತ್ತಿದ್ದ ಮಾಂಸಾನ್ನ ಬಲಿಗಳು ತಿಳಿದು, ಆಚಾರ್ಯರು ಇದನ್ನು ನಿಲ್ಲಿಸಲೇಬೇಕೆಂದು ಮಧುರೆಗೆ ಬಂದಿದ್ದರು. ಪಾಂಡ್ಯ ರಾಜ ಅವರನ್ನು ಸ್ವಾಗತಿಸಿ, ಸತ್ಕರಿಸಿ, ಸೇವೆ ಸಲ್ಲಿಸಿದ ಬಳಿಕ ಸಾಯಂಕಾಲ ಶಂಕರರು ಕೇಳುತ್ತಾರೆ, ರಾಜನ ಅರಮನೆಯಲ್ಲಿ ತಂಗಲಾಗುವುದಿಲ್ಲ, ಯಾವ ಗೃಹಸ್ಥನ ಮನೆಯಲ್ಲೂ ಆಗದು, ಮಧುರೆಗೆ ಬಂದಿದ್ದೇನೆ, ಮೀನಾಕ್ಷಿಯ ದೇವಾಲಯದಲ್ಲಿ ವಿಶ್ರಮಿಸುತ್ತೇನೆ ಎಂದು, ಆಗ ರಾಜ ತಿಳಿಸಿ ಹೇಳುತ್ತಾನೆ. ಆಚಾರ್ಯರೆ ಮೀನಾಕ್ಷಿ ಸೂರ್ಯಾಸ್ತವಾದೊಡನೆ ರಕ್ತಾಕ್ಷಿಯಾಗಿ ಕಂಡು ಕಂಡಲ್ಲಿ ಕಂಡು ಕಂಡವರನ್ನೆಲ್ಲ ಭಕ್ಷಿಸುತ್ತಾಳೆ ಎಂದು, ಆಗ ಶ್ರೀ ಶ್ರೀ ಶಂಕರರು ನಾನು ಬಂದಿದ್ದೆ ಆ ತಾಯಿಯನ್ನು ನೋಡಲಿಕ್ಕೆ ಎಂದು ನಗುತ್ತಾ ಹೇಳಿದರು. ಪಾಂಡ್ಯ ರಾಜ ಎಲ್ಲ ಸಿದ್ಧತೆಯೊಂದಿಗೆ ಮೇಣೆಯಲ್ಲಿ ಆಚಾರ್ಯರನ್ನು ದೇವಾಲಯಕ್ಕೆ ಕಳುಹಿಸಿಕೊಡುತ್ತಾನೆ. ಶ್ರೀ ಶಂಕರಾಚಾರ್ಯರು ದೇವಾಲಯಕ್ಕೆ ಬಂದು ಶ್ರೀ ದೇವಿಯ ಗರ್ಭಗುಡಿಯ ಮುಂದಿನ ಜಗುಲಿಯ ಮೇಲೆ ಪದ್ಮಾಸನದಲ್ಲಿ ಕುಳಿತರು. ಸೂರ್ಯಾಸ್ತವಾಗುತ್ತಿದ್ದಂತೆ ದೇಗುಲದ ಗಂಟೆಗಳು ತಾನೇ ಭಾರಿಸಿದವು ಮರಕತ ಶಿಲೆಯ ಮೀನಾಕ್ಷಿಯ ಮೂರ್ತಿಯಿಂದ ತಾಯಿ ಪ್ರಕಟವಾಗಿದ್ದಳು. ಪ್ರಕಾಶವಾದ ಪ್ರಭೆ, ಹೊಳೆಯುವ ಕಣ್ಣುಗಳು ಅತಿ ಸುಂದರವಾದ, ಪ್ರಶಾಂತವಾದ ವದನ ಕಂಡಿದ್ದ ಶಂಕರರಿಗೆ, ಮೀನಾಕ್ಷಿಯು ತನ್ನ ವಾಮ ಪಾದವನ್ನು ಹೊರ ಇಡುತ್ತಲೇ ಕರಾಳ ವದನ, ಕೃಷ್ಣ ಶರೀರ, ಕೆಂಪು ಕಣ್ಣುಗಳ ಹೂಂ..ಕಾರದ ಘರ್ಜನೆಯ ಬದಲಾವಣೆಯನ್ನು  ಕಂಡರು. ಶ್ರೀ ಶ್ರೀ ಶಂಕರರು ಈ ಎಲ್ಲಾ ಬದಲಾವಣೆಯನ್ನು ಕಂಡು ಕಿಂಚಿತ್ತೂ ಹೆದರದೆ ಹೆತ್ತ ತಾಯಿಯ ಬಳಿ ಮಗುವಿರಬಹುದಾದ ವಿಶ್ವಾಸದಲ್ಲೆ ಕುಳಿತಿದ್ದಾರೆ.

ಮೀನಾಕ್ಷಿಯು ಹೊರ ಹೋಗುತ್ತಿರುವಾಗ ಶಂಕರರು ಹೇಳುತ್ತಿದ್ದ ಶ್ರೀ ಲಲಿತಾ ಸಹಸ್ರನಾಮಸ್ತೋತ್ರವನ್ನು ಕೇಳಿ ತಾಯಿ ಅಲ್ಲಿಯೇ ನಿಂತಳು.

ತಾಯಿ ಕೇಳುತ್ತಾಳೆ ಹೇ ಬಾಲವಟು ಯಾರು ನೀನು?. ತನ್ನ ಹೆಸರು ಹೇಳಿ ಪರಿಚಯ ಮಾಡಿಕೊಂಡರು. ದೊಡ್ಡವರ ಜೊತೆ ಮಾತನಾಡಿದ್ದು ಪರಿವಸಾನವಾಗ ಬೇಕು  ಏನು ವರ ಬೇಕು ನಿನಗೆ ಕೇಳು ಎಂದಳು. ಶ್ರೀ ಶ್ರೀ ಶಂಕರರು, ಅಮ್ಮ ನಿನ್ನ ಸಹಸ್ರ ನಾಮಗಳನ್ನು ನಿನ್ನೆದುರೇ ಹಾಡಿ ನನಗೆ ತಿಳಿದ ಅರ್ಥ ಹೇಳಬೇಕು ಎಂದರು. ಮೀನಾಕ್ಷಿ ಒಪ್ಪಿ ನಿಂತಳು. ಶಂಕರರ ವಾಖ್ಚಾತೂರ್ಯ, ಭಕ್ತಿ, ಪ್ರೀತಿಯು ಮೀನಾಕ್ಷಿಯನ್ನು ಮೆಚ್ಚಿಸಿತ್ತು. ಇಷ್ಟು ಚೆನ್ನಾಗಿ ನನ್ನನ್ನು ಸ್ತುತಿಸಿದ್ದಕ್ಕಾಗಿ ಏನು ವರ ಬೇಕು ಎಂದು ಶಂಕರರಿಗೆ ದೇವಿ ಕೇಳಿದಳು. ಶಂಕರರು ಅಮ್ಮ ನಿನ್ನೊಂದಿಗೆ ನಾನು ಪಗಡೆ ಆಟ ಆಡಬೇಕು ಎಂದು ವರ ಕೇಳಿದ್ದರು. ಇತ್ತ ಮೀನಾಕ್ಷಿಗೆ ಆಶ್ಚರ್ಯ ದೇವಸ್ಥಾನಕ್ಕೆ ಬರುವ ಭಕ್ತರು ಏನೆಲ್ಲಾ  ವರಗಳನ್ನ, ಬೇಡಿಕೆಗಳನ್ನ  ಇಡುತ್ತಾರೆ. ನೀನು ಪಗಡೆ ಆಡಬೇಕೆ ಸರಿ ಎಂದಳು. ಶಂಕರರು ಅಮ್ಮ ನಿನಗೆ ಅರ್ಚಿಸಿರುವ  ಅರಿಶಿನ- ಕುಂಕುಮದಿಂದ ಪಗಡೆ ಮನೆಗಳನ್ನು ರಚಿಸುತ್ತೇನೆ, ನಿನ್ನ ಪಾದದ ಕೆಳಗಿರುವ ಹೂವುಗಳನ್ನು ನನ್ನ ಕಾಯಿಗಳನ್ನಾಗಿ ಮಾಡಿಕೊಳ್ಳುತ್ತೇನೆ ನೀನು ನಿನ್ನ ಕಾಲoದಗೆಯಲ್ಲಿ ಹುದುಗಿಸಿರುವ ಮುತ್ತು, ಹವಳಗಳನ್ನು ಕಾಯಿಗಳನ್ನಾಗಿ ಮಾಡಿಕೋ ಎಂದರು. ಮೀನಾಕ್ಷಿ ಸರಿಯೆಂದಳು.

ಶಂಕರರು ಅಮ್ಮ ನನಗೆ ಸಂಖ್ಯಾಶಾಸ್ತ್ರ ಮತ್ತು ಅಕ್ಷರ ಶಾಸ್ತ್ರವು ತಿಳಿದಿದೆ, ನನಗೆ ನಿನಗೆ ಬೀಳುವ ಗರಳನ್ನು ಲೆಕ್ಕಾಚಾರ ಮಾಡಿ ಸಂಖ್ಯಾ ಶಾಸ್ತ್ರಕ್ಕೆ ಅನುಗುಣವಾಗಿ ರೇಖೆಗಳನ್ನು ರಚಿಸುತ್ತೇನೆ ಮತ್ತು ಅಕ್ಷರ ಶಾಸ್ತ್ರದಿಂದ ಬೀಜಾಕ್ಷರಗಳನ್ನು ರಚಿಸುತ್ತೇನೆ  ಎಂದರು. ಮೀನಾಕ್ಷಿಯು ಸರಿ ಎಂದಳು. ಪಗಡೆಯ ಮನೆಗಳು, ಕಾಯಿ ಸಿದ್ಧವಾಯಿತು, ಅಮ್ಮ ದಾಳಗಳನ್ನು ನೀನೆ ಸೃಷ್ಟಿಸಿಕೊಡು ಎಂದರು. ತಾಯಿಯು ಸರಿ  ತೆಗೆದುಕೊ ಎಂದಳು. ಶ್ರೀ ಶ್ರೀ ಶಂಕರರು ನಗುಮುಖದಲ್ಲಿ ಅಮ್ಮ ಎಂದರು ಮೀನಾಕ್ಷಿಯು ಇನ್ನು ಏನಯ್ಯ ಎಂದಳು, ಶಂಕರರು ಏನಿಲ್ಲಾ ಅಮ್ಮ ಗೆಲ್ಲು ಅಂತ ಆಶೀರ್ವಾದ ಮಾಡು ಎಂದರು  ಅದಕ್ಕೆ ಮೀನಾಕ್ಷಿಯು ಅದು ಹೇಗೆ ಸಾಧ್ಯ  ನನಗೆ ಸೋಲೇ ಇಲ್ಲ - "ವಿಜಯಾ ವಿಮಲಾ ವಂದ್ಯ..."ಎಂದು ನೀನೆ ನನ್ನನ್ನು ಪಠಿಸಿದೆಯಲ್ಲಾ. ಆದರೂ ಕೇಳಿದ್ದೀಯೇ ... ನಿನ್ನಿಂದ ರಚನೆಯಾದ ಗ್ರಂಥಗಳು,  ಸ್ತೋತ್ರಗಳು,  ಕೃತಿಗಳು ಅಜರಾಮರವಾಗಿ ಗೆಲ್ಲಲಿ ಎಂದು ಹರಸಿದಳು ಇಷ್ಟೆಲ್ಲಾ ಕೇಳಿದ್ದೀಯಾ ನನ್ನದು ಒಂದು ಷರತ್ತು ಇದೆ,   ಮೀನಾಕ್ಷಿಯು ಶ್ರೀ ಶ್ರೀ ಶಂಕರರಿಗೆ ಹೇಳುವಳು. ಶಂಕರರು ಏನಮ್ಮ ಎಂದರು. ಏನನ್ನು ಪಣವಿಡದೆ ನಾನು ಆಟ ಆಡುವುದಿಲ್ಲ ಏನಾದರೂ ಪಣವಿಡಬೇಕು ಎಂದಳು. ಅದಕ್ಕೆ ಶ್ರೀ ಶ್ರೀ ಶಂಕರರು ಅಮ್ಮ ನೀನು ಸರ್ವಶಕ್ತಳು, ಮೂರು ಲೋಕಕ್ಕೂ ಒಡೆಯಳು, ರಾಜರಾಣಿಯರಿಗೂ ರಾಣಿಯಾದವಳು. ನಾನು ಸಂನ್ಯಾಸಿ ನನ್ನ ಬಳಿ ಏನೂ ಇಲ್ಲ. ಆದರೂ ಒಂದು ಪಣ ಇಡುತ್ತೇನೆ, ಅಮ್ಮ ನೀನು ಸೋತರೆ....... ಸೋಲುವ ಮಾತೇ ಇಲ್ಲಯ್ಯ ಎಂದಳು ಮೀನಾಕ್ಷಿ. ಶಂಕರರು ಹೇಳಿದರು ಅಕಸ್ಮಾತ್ ನೀನು ಸೋತರೆ ನರಬಲಿ, ಮಾಂಸಾನ್ನ ನೈವೇದ್ಯವನ್ನು ನೀನು ಸಂಪೂರ್ಣವಾಗಿ ನಿಲ್ಲಿಸಬೇಕು, ಅಕಸ್ಮಾತ್ ನಾನು ಸೋತರೆ ನಾನೇ ನಿನಗೆ ಈ ದಿನದ ಬಲಿಯಾಗುತ್ತೇನೆ ಎಂದರು. ಈ ಪಣ ಅಷ್ಟೇನೂ ಚೆನ್ನಾಗಿಲ್ಲ  ಎಂದು ಮೀನಾಕ್ಷಿದೇವಿ ಆಟವನ್ನು ಪ್ರಾರಂಭಿಸಿದಳು ಮತ್ತೆ ಶಂಕರರು ಅಮ್ಮ ಎಂದರು  ಏನುಯ್ಯ  ಎಂದು ತಾಯಿ ಕೇಳಿದಳು ಅದಕ್ಕೆ ಆಚಾರ್ಯರು ನಿನ್ನ ಇಚ್ಛೆಯಂತೆ ಗರ ಬೀಳುವುದು ಸಹಜ ಹಾಗೆ ನನ್ನ ಇಚ್ಛೆಯಂತೆಯೂ ಗರ ಬೀಳುವಂತೆ ಆಶೀರ್ವದಿಸು ಎಂದರು. ಇನ್ನೇನು ಆಟ ಎಂದು ದೇವಿ  ಕೇಳಿದಕ್ಕೆ, ಬಾಲ ಶಂಕರರು ಅಮ್ಮ ಗರ ಕೇಳಿದಷ್ಟು ಬೀಳಲಿ ಕಾಯಿಯನ್ನು ಬುದ್ಧಿವಂತಿಕೆಯಿಂದ  ನಡೆಸಬೇಕಲ್ಲ ಎಂದರು, ಮೀನಾಕ್ಷಿ ಆಗಲಿ ಎಂದಳು.

ಆಟ ಮುಂದುವರೆದಂತೆ ಆಟದ ಮಧ್ಯೆ ಮಧ್ಯೆ ಬಿಂದುವಿನ ಮಧ್ಯದಲ್ಲಿರುವ ದೇವಿಯ ಸುತ್ತ ತ್ರಿಕೋನ, ವಸು ಕೋನ, ದಶಾರಯುಗ್ಮ ಹೀಗೆ ಆನೇಕ ಚಕ್ರಗಳನ್ನು ರಚಿಸಿದರು. ದೇವಿ ಏನಯ್ಯ ಎಂದು ಕೇಳಿದಳು. ಅಮ್ಮ ನಾನು ಕೇಳಿದ್ದೇನೇ ನೀನೂ ವರ ಕೊಟ್ಟಿದ್ದೀಯಾ ಹಾಗಾಗಿ ರಚಿಸುತ್ತಿದ್ದೇನೇ ತಪ್ಪಿದ್ದರೆ ಹೇಳು ಎಂದರು, ಸರಿ ಎಂದಳು. ಆಟ ಕೊನೆಯ ಹಂತಕ್ಕೆ ಬಂತು. ಮೀನಾಕ್ಷಿ ಗೆದ್ದೆ ಬಿಟ್ಟಳು ಶ್ರೀ ಶ್ರೀ ಶಂಕರರಿಗೂ ಒಂದೇ  ಗರ ಬೇಕಿತ್ತು ಕೊನೆಯ ಕಾಯಿ ಹಣ್ಣು ಮಾಡುವುದಕ್ಕೆ, ಮೀನಾಕ್ಷಿ ಹೇಳಿದಳು ನಾನು ಗೆದ್ದೆ, ನೀನು ಸೋತೆ ಆಟ ಮುಗಿಯಿತು. ಪಣದ ಪ್ರಕಾರ ನಾನು ನಿನ್ನನ್ನು ಭಕ್ಷಿಸಬೇಕು ಎಂದಳು.
ಶಂಕರರು ಅಮ್ಮ ನಾನು ಗೆದ್ದಿದ್ದೇನೆ ಎಂದು ನನಗೆ ಗೋಚರವಾಗುತ್ತಿದೆ ಎಂದರು.ಇತ್ತ ಪಾಂಡ್ಯರಾಜ ಬಾಲವಟುವನ್ನು ಮೀನಾಕ್ಷಿಯ ಮಂದಿರಕ್ಕೆ ಕಳುಹಿಸಿಬಿಟ್ಟೆನಲ್ಲ ಎಂದು ಚಿಂತಿಸಿ ಏನಾದರು ಆಗಲಿ ಎಂದು ಅವನು ದೇವಾಲಯಕ್ಕೆ ಬಂದು ಶ್ರೀ ಶ್ರೀ ಶಂಕರರು ಹಾಗೂ ಮೀನಾಕ್ಷಿ ತಾಯಿಯು ವಾಕ್ ಸಂಧಾನವನ್ನು ಕಂಡು ದಿಗ್ರ್ಬಾಂತನಾಗಿ ನಿಂತಿದ್ದಾನೆ.
ಶ್ರೀ ದೇವಿಯು ಶಂಕರನಿಗೆ ಎಷ್ಟೋ ಬಾರಿ ನನಗೆ ಅಮ್ಮ.. ಅಮ್ಮ.. ಎಂದಿದ್ದೀಯಾ ಬದುಕಿಸುತ್ತೇನೆ ಹೋಗು ಎಂದು ಮೇಲೇಳಲು ಪ್ರಯತ್ನಿಸುತ್ತಿದ್ದಾಳೆ ಆಗುತ್ತಿಲ್ಲಾ ! ಸಾತ್ವಿಕ ಶ್ರೀ ಚಕ್ರದಲ್ಲಿ ಶ್ರೀ ದೇವಿಯ ನೆರಿಗೆಗಳೆಲ್ಲಾ ಸೇರಿ ಹೋಗಿವೆ. ಏನಯ್ಯ ಏನು ಮಾಡಿರುವೆ ಎಂದು ಕೇಳಿದಳು. ಆಗ ಶ್ರೀ ಶ್ರೀ ಶಂಕರರು ಅಮ್ಮ ನಿನ್ನ ಸುತ್ತ ನಿನ್ನ ಅನುಗ್ರಹದಿಂದಲೇ ಸಾತ್ವಿಕ ಶ್ರೀ ಚಕ್ರದ ರಚನೆ ಆಗಿದೆ. ನೀನೂ ಬಿಂದು ಮಂಡಲವಾಸಿನಿಯಾಗಿರುವೆ ಹಾಗಾಗಿ ನೀನು ಬಂದ ರೀತಿಯಲ್ಲೆ ತಿರುಗಿ ಹೋಗಲು ಸಾಧ್ಯವಿಲ್ಲ. ನೀನು ಕಾಳಿಯಾಗಿ ಬಂದೆ ಗೌರಿಯಾಗಿ ಹೋಗಬೇಕು ಈ ಸಾತ್ವಿಕ ಶ್ರೀ ಚಕ್ರಕ್ಕೆ ಬದ್ದಳಾಗಿ ಹೋಗಬೇಕು ಎಂದರು. ಅಷ್ಟರಲ್ಲಿ ನಾಲ್ಕನೇ ಜಾವದ ಕಹಳೆ‌‌‌ ಮೊಳಗಿತ್ತು.ಮೀನಾಕ್ಷಿಯು ಶ್ರೀ ಸುಂದರೇಶ್ವರನನ್ನು ನೋಡಿದಳು.
ಶ್ರೀ ಸುಂದರೇಶ್ವರರು ಪ್ರತ್ಯಕ್ಷವಾಗಿ, ಶಂಕರ ನನ್ನದೆ ಅಂಶಸಂಭೂತನಾಗಿ, ಬಾಲವಟುವಾಗಿ, ಕಾಮ ಪರಿತ್ಯಾಗಿಯಾಗಿ, ವಿರಾಗಿಯಾಗಿ  ಭಂಡಾಸುರನ ವಧೆಯಿಂದ ಮುಂದುವರೆದ ಈ ನಿನ್ನ ನರಬಲಿಯನ್ನು ನಿಲ್ಲಿಸಲೆಂದೆ ಬಂದ ಕಾರಣಿಪುರುಷ ಎಂದರು. ಆಗ ತಾಯಿ ಮೀನಾಕ್ಷಿ ಶಂಕರರಿಗೆ ಮಾಂಸಾನ್ನ, ನರಬಲಿ, ಸಂಪೂರ್ಣವಾಗಿ ನಿಲ್ಲುತ್ತದೆ ಎಂದು ಆಶ್ವಾಸನೆ ಇತ್ತಳು. ಬೆಳಗಿನ ಜಾವವಾಗಿತ್ತು ಶ್ರೀ ಸುಂದರೇಶ್ವರರು ಹಾಗೂ ಮೀನಾಕ್ಷಿಯು ಶ್ರೀ ಶಂಕರಾಚಾರ್ಯರಿಗೆ ಆಶೀರ್ವಾದಿಸಿ ತಮ್ಮ ಮೂರ್ತಿಯಲ್ಲಿ ಲೀನವಾದರು. ಶಂಕರರಿಂದ ಸ್ಥಾಪಿತವಾದ ಸಾತ್ವಿಕ ಶ್ರೀ ಚಕ್ರವು ಸ್ವರ್ಣರೇಖೆಯಿಂದ ಹೊಳೆಯುವಂತಿತ್ತು. ಪಾಂಡ್ಯ ರಾಜನಿಗೆ ಶ್ರೀ ಶಂಕರರು ಮೀನಾಕ್ಷಿ ದೇವಿ ಕುಳಿತಿದ್ದ ಸ್ಥಳದಲ್ಲಿ  ಸ್ಥಾಪಿತವಾಗಿದ್ದ ಸಾತ್ವಿಕ ಶ್ರೀ ಚಕ್ರವನ್ನು ವಿವರಿಸಿ ಧ್ಯಾನ ಶ್ಲೋಕವನ್ನು ಪಠಿಸಿದರು.
ಬಿಂದು ತ್ರಿಕೋನ ವಸುಕೋನ ದಶರಾಯುಗ್ಮಾ |
ಮನ್ವoಸ್ತ್ರ  ನಾಗದಳ ಷೋಡಶ ಪತ್ರ ಯುಕ್ತಮ್ ||
ವೃತ ತ್ರಯಂಚ ಧರಣಿ ಸಧನಂ ತ್ರಯಂಚ |
ಶ್ರೀಚಕ್ರ ರಾಜ ಉದಿತಃ ಪರದೇವತಾಯಹಾ ||
ಅದ್ವೈತ ಸಿದ್ದಾಂತದ ಸಾಧನವಾಗಿ ಮುಂದೆ ಎಲ್ಲಾ ದೇವಿಯರ ದೇವಾಲಯಗಳಲ್ಲಿ ಸಾತ್ವಿಕ ಶ್ರೀಚಕ್ರ ಸ್ಥಾಪನೆಯಾಯಿತು.

ಸರ್ವೇ ಜನಾಃ ಸುಖಿನೋ ಭವಂತು|
 ಸರ್ವೇ ಸಂತು ನಿರಾಮಯಾಃ|
ಸರ್ವೇ ಭದ್ರಾಣಿ ಪಶ್ಯಂತು ಮಾಕಶ್ಚಿದ್ದುಃಖಭಾಗ್-‌ಭವೇತ್| 

ವಂದನೆಗಳು
ಪೃಥ್ವಿ ಎಂ ಎಲ್. 

Friday, May 1, 2020

ಮೂಲ ಶ್ರೀಚಕ್ರದ ಉಗಮ




ನಮ್ಮ ಪೂಜಾನುಷ್ಠನಗಳಲ್ಲಿ, ಆಚರಣೆಗಳಲ್ಲಿ ಶ್ರೀ ಚಕ್ರವು ಅತ್ಯಂತ ಶಕ್ತಿಯುತವಾದದ್ದು ಹಾಗೂ ಪ್ರಾಧಾನ್ಯವಾಗಿರುವ ಪೂಜ್ಯನೀಯ,  ಪರಮ ಪವಿತ್ರ ಶ್ರೀ ದೇವಿಯ ಪ್ರತಿರೂಪವಾಗಿದೆ. ಇಂತಹ ಶ್ರೀಚಕ್ರದ ಉಗಮ ಆದುದ್ದಾದರು ಹೇಗೆ ಎಂದು ಯೋಚಿಸಿದರೆ ನಮಗೆ ಸವಿಸ್ತಾರವಾದ ಅನೇಕ ಉಪಕಥೆಗಳನ್ನು ಹೊಂದಿರುವ ಪುಣ್ಯಪ್ರದವಾದ ಕಥೆಯು ದೊರೆಯುತ್ತದೆ. ಈ ಪೌರಾಣಿಕ ಶ್ರೇಷ್ಠ ಕಥೆಯಲ್ಲಿ ಶ್ರೀ ಚಕ್ರದ ಉಗಮದ ಕುರಿತು ಒಂದು ಸಣ್ಣ ಲೇಖನವನ್ನು ದೈವಾಸಕ್ತರಿಗಾಗಿ ಪ್ರಸ್ತುತಪಡಿಸುತ್ತಿದ್ದೆನೆ. 
  ನಾನು ಮೊದಲೇ ಹೇಳಿದಂತೆ ಇದು ಸುವಿಸ್ಥಾರವಾದ ವ್ಯಾಖ್ಯಾನ, ಲಲಿತೋಪಾಖ್ಯಾನದಲ್ಲಿ ಪ್ರಕಟವಾಗಿದೆ. ಸಾಧ್ಯವಾದಷ್ಟೂ ಮಟ್ಟಿಗೆ ಸರಳವಾಗಿ ಪ್ರಸ್ತುತಪಡಿಸಲು ಪ್ರಯತ್ನಿಸುತ್ತಿದ್ದೇನೆ. 
  ಸತಿ ದೇವಿಯು ದೂರವಾದ ನಂತರ ಶಿವನು ಭೈರಾಗಿಯಾಗಿ ತಪೋಮಗ್ನನಾಗಿರುವ ಸಮಯ, ಇತ್ತ ಪಾರ್ವತಿಯು  ಶಿವನನ್ನೇ ವರಿಸಬೇಕೆಂದು ಇಚ್ಛಿಸಿ ಕೈಲಾಸದಲ್ಲಿ ಶಿವನ ಮುಂದೆ ಶಿವನನ್ನೇ ಧ್ಯಾನಿಸಿ ಕುಳಿತಿದ್ದಾಳೆ. ದೇವತೆಗಳು ಪಾರ್ವತಿಯ ಇಚ್ಛೆಯನ್ನು ಪೂರೈಸುವುದಕ್ಕಾಗಿ ರತಿ-ಮನ್ಮಥರಲ್ಲಿ ವಿನಂತಿಸಿ ಶಿವನ ತಪೋಭಂಗ ಪಡಿಸಿದ್ದಾಗಿತ್ತು. ಕೈಲಾಸದಲ್ಲಿ ಮುಕ್ಕಣ್ಣನ ಮೂರನೇ ಕಣ್ಣಿಗೆ ಮನ್ಮಥ ಸುಟ್ಟು ಭಸ್ಮವಾದಗ ಅಲ್ಲಿಯೆ ಇದ್ದ ಚಿತ್ರಕರ್ಮ ಎಂಬ ಗಂಧರ್ವನು ಆ ಬೂದಿಯಲ್ಲಿ ಒಂದು ಸುಂದರವಾದ ಗೊಂಬೆಯನ್ನು ತಯಾರಿಸಿದ. ಎಷ್ಟೋ ಕಾಲಘಟ್ಟವಾದ ನಂತರ ಆ ಗೊಂಬೆಯನ್ನು ನೋಡಿದ ಪರಶಿವ ಮನಸ್ಸಿನಲ್ಲಿ ಎಷ್ಟು ಚೆನ್ನಾಗಿದೆ ಎಂದು ದಿಟ್ಟಿಸಿ ನೋಡಿದ,  ಈಶ್ವರನ ಕೃಪಾಕಟಾಕ್ಷದಿಂದ ಆ ಗೊಂಬೆಗೆ ಜೀವ ಬಂದು, ಚಿತ್ರಕರ್ಮ ಶತರುದ್ರಿ ಮಂತ್ರವನ್ನು ಉಪದೇಶಿಸಿದ್ದರು. ನಿರಂತರ ಶತರುದ್ರಿ ಮಂತ್ರದ ಜಪದಿಂದ ಭೋಲೇನಾಥನ ಅನುಗ್ರಹವಾಗಿ ವರವು ಸಿಕ್ಕಿತು. ಇದನ್ನು ಸತ್ಯಲೋಕದಿಂದ ನೋಡುತ್ತಿದ್ದ ಬ್ರಹ್ಮ ದೇವರು ಸಂತೋಷದಿಂದ ಭಂಡ್  ಭಂಡ್  ಎಂದು ಗರ್ಜಿಸಿದ್ದರು, ಈ ಜೀವವಿರುವ ಗೊಂಬೆಗೆ ನಾಮಕರಣವಾಯಿತು  "ಭಂಡಾಸುರ"  ಎಂದು. 
  ಪರಮೇಶ್ವರನ ವರ, ಬ್ರಹ್ಮನ ಅನುಗ್ರಹ ಎರಡು ಸಿಕ್ಕ ಭಂಡಾಸುರನ ದುರಹಂಕಾರ ಎಲ್ಲೆ ಮೀರಿತ್ತು. ದೇವೇಂದ್ರನಿಗೆ ಉಪಟಳ ಶುರುವಾಯಿತು. ದೇವತೆಗಳು ಬೃಹಸ್ಪತಿ ಆಚಾರ್ಯರ ಸಲಹೆಯ ಮೇರೆಗೆ ಕಾಮೇಶ್ವರಿಯಾದ ಶ್ರೀ
ಲಲಿತೆಯನ್ನು ಪ್ರಾರ್ಥಿಸಲು ಸುಮೇರು ಪರ್ವತದ ತಪ್ಪಲಿನಲ್ಲಿ ಯಜ್ಞವನ್ನು ಆರಂಬಿಸಿದರು, ಯಜ್ಞದ ಅಂತ್ಯಕಾಲಕ್ಕೆ ಸರಿಯಾಗಿ ಅತ್ಯಂತ ದೈವಿಭೂತಳು, ಸರ್ವಶಕ್ತಳೂ, ಸ್ಪುರದ್ರೂಪಳು ಆದ ಶ್ರೀ ಲಲಿತತ್ರಿಪುರಸುಂದರಿ ದೇವಿಯು ಪ್ರಕಾಶಮಾನವಾಗಿ ಯಜ್ಞಕುಂಡದಿಂದ ಉದ್ಭವಿಸಿದಳು.
  ಚಿದಾಗ್ನಿ ಕುಂಡ ಸಂಭೂತೆಯಾಗಿ, ದೇವತೆಗಳ ಕಾರ್ಯಕ್ಕಾಗಿ ( ದೇವಕಾರ್ಯ ಸಮುದ್ಯತಾ) ಅಂದರೆ ಭಂಡಾಸುರನ ವಿನಾಶಕ್ಕಾಗಿ ಜನ್ಮ ತಳೆದಳು. ಆಕೆಯ ಬಲಗಾಲಿನ ಹೆಬ್ಬೆರಳು ಒಂದು ಬಿಂದುವಿನ ಮೇಲೆ ಇತ್ತು, ಆ ಬಿಂದುವಿನ ಸುತ್ತಲೂ ಶಕ್ತಿಯುತ ಮಂತ್ರ ಉಚ್ಚಾರದಿಂದ ಚಕ್ರವು ಸೃಷ್ಟಿಯಯಿತು. ಈ ಚಕ್ರವೇ ಆ ದೇವಿಗೆ ಆವಾಸವಾಗಿ, ಒಂದು ರೀತಿಯ ರಥದಂತೆ ಕಾಣುತ್ತಿತ್ತು. ಅತ್ಯಂತ ಶಕ್ತಿಯ ಘೋರಾಕ್ಷರದಿಂದ, ಘೋರವರ್ಣಗಳಿಂದ ಕೂಡಿತ್ತು. ಹೀಗೆ ಮೂಲ ಶ್ರೀಚಕ್ರದ ಉದ್ಭವವಾಗಿರುತ್ತದೆ.
ಶ್ರೀ ಲಲಿತೆಯು ಚಿಂತಾಮಣಿ ಎಂಬ ಗೃಹದಲ್ಲಿ ಕಾಮರಾಜ ಪೀಠದ ಮೇಲೆ ಅಂದರೆ ಬ್ರಹ್ಮ, ವಿಷ್ಣು, ಈಶ್ವರ, ಇಂದ್ರ ಎಂಬ ನಾಲ್ಕು ಕಾಲ್ಗಳುಳ್ಳ ಮಹಾದೇವನೇ ಆಸನವಾಗಿರುವ ಪೀಠದ ಮೇಲೆ ಕಾಮೇಶ್ವರನ ಎಡತೊಡೆಯ ಮೇಲೆ ವರ್ಣಿಸಲಾಗದ ಸೌಂದರ್ಯದ ರಾಶಿಯಾಗಿ ಶ್ರೀ ಕಾಮೇಶ್ವರಿಯು ಕುಳಿತಿರುತ್ತಾಳೆ ಎಂಬುದು ಪ್ರತೀತಿ.
    ಇದು ಮೂಲ ಶ್ರೀ ಚಕ್ರದ ಉಗಮದ ಕಥೆ. ಆದರೆ ಇಂದು ನಾವು ಪೂಜಿಸುತ್ತಿರುವುದು ಸಂಪೂರ್ಣ ಸಾತ್ವಿಕ ಶ್ರೀ ಚಕ್ರ. ಲಲಿತತ್ರಿಪುರಸಂದರಿಯಿಂದ ಶೋಣಿ ಪುರದ ಭಂಡಾಸುರನ ವಧೆಯಾದ ನಂತರ ಕಾಲಕ್ರಮೇಣ ಶಕ್ತಿಪೀಠಗಳಲ್ಲಿ, ದೇವಿಯ ದೇಗುಲಗಳಲ್ಲಿ ಶ್ರೀಚಕ್ರಾರಧಾನೆ ಮುಂದುವರೆಯಿತು. ಆದರೆ ಈ ಸ್ಥಳಗಳಲ್ಲಿ ನೆಲೆಸಿದ್ದ ದೇವಿಯು ಸೂರ್ಯಾಸ್ತದ ನಂತರ ಮಾಂಸಾನ್ನ ಪ್ರಿಯೆಯಾಗುತ್ತಿದ್ದಳು, ಬಲಿಗಳನ್ನು ಕೊಡಬೇಕಿತ್ತು. ದೈವಶಕ್ತಿಯಿಂದ ಅಸುರಶಕ್ತಿಯ ವಧೆಯ ಪರಿಣಾಮ ಗೌರಿಯು ಕಾಳಿಯಾಗುತ್ತಿದ್ದಳು,  ಕಾಮಾಕ್ಷಿಯು ರಕ್ತಾಕ್ಷಿಯಾಗಿ ಬದಲಾಗುತ್ತಿದ್ದಳು.

ಈ ಸುದ್ದಿಯು  ಶ್ರೀ ಶ್ರೀ ಶಂಕರಾಚಾರ್ಯರಲ್ಲಿಗೆ ತಲುಪಿ ಈ ಬಲಿ ಕೊಡುವ ಪದ್ದತಿಯನ್ನು  ಸಂಪೂರ್ಣವಾಗಿ ಬದಲಿಸಲು ನಿರ್ಧರಿಸಿದರು.
ಮುಂದಿನ ಲೇಖನದಲ್ಲಿ ಸಾತ್ವಿಕ ಶ್ರೀ ಚಕ್ರದ ರಚನೆ ಹೇಗಾಯಿತು ಎಂಬುದರ ಬಗ್ಗೆ ಬರೆಯುವ ಅಪೇಕ್ಷೆ ಇದೆ.  ತಿಳಿದಷ್ಟರ ಮಟ್ಟಿಗೆ ಬರೆದಿದ್ದೇನೆ. ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ತಳಿಸಿ.

ವಂದನೆಗಳೊಂದಿಗೆ
ಪೃಥ್ವಿ ಎಂ ಎಲ್. 

Friday, April 24, 2020

ಬಳಲಿ ಬದುಕುತ್ತಿರುವ ಜೀವವೇ ಶ್ರೇಷ್ಠ.


ನಮ್ಮಲ್ಲಿ ಎಷ್ಟೋ ಜನಕ್ಕೆ ಪದೇ ಪದೇ ಅನ್ನಿಸೋ ಭಾವನೆ ಅಂದರೆ ಈ ಕಷ್ಟಗಳೇ ಜೀವನವೇ? ಎಂದು.. ಆದರೆ ಕಣ್ಣುಗಳನ್ನು ತೆರೆದು ನೋಡಿದರೆ ತಿಳಿಯುತ್ತೆ ಯಾರ ಜೀವನದಲ್ಲೂ ಕಷ್ಟಗಳೇ ಇಲ್ಲ, ಇರುವುದು ಉತ್ತರವಿರುವ ಸವಾಲುಗಳು ಮಾತ್ರ ಅಂತ. ನಾವು solutions/ಉತ್ತರಗಳನ್ನು ಹುಡುಕುವಷ್ಟು ಶಕ್ತಿಶಾಲಿಗಳಾಗಿರಬೇಕು ಅಷ್ಟೇ. ಬಹು ಬೇಗ ಬೇಸರ, ನಿರುತ್ಸಾಹ, ದುಃಖ, ಚಿಂತನೆಗಳಿಲ್ಲದ ಚಿಂತೆ. So called depression ಮೈ-ಮನಸ್ಸುಗಳನ್ನ ತುಂಬಿ ಬಿಡತ್ತೆ. ಇದರ ಆಚೆ ಸ್ವಲ್ಪ ನಾವು ಯೋಚಿಸಿದರೆ, ಈ ನಮ್ಮ ಭರತ ಭೂಮಿಯಲ್ಲಿ  ಈ ದಿನವು ಕೂಡ ಪೂಜ್ಯನೀಯರಾದ, ಮರ್ಯಾದ ಪುರುಷ ಶ್ರೀ ರಾಮಚಂದ್ರರಿಗೆ ಕಷ್ಟಗಳು ಇರಲಿಲ್ಲವೇ? ಲೌಕಿಕ ಸೂಕ್ಷ್ಮದಿಂದ ನೋಡಿ ಹೋಲಿಸಿದರೆ ರಾವಣನಿಗಿಂತ ಒಂದರ ಮೇಲೊಂದು ಕಷ್ಟಗಳನ್ನ ಕಂಡಿದ್ದು ಶ್ರೀರಾಮನೇ..  ಸಾಕ್ಷಾತ್ ಭಗವಂತನಾದ ಶ್ರೀ ಕೃಷ್ಣನಿಗೆ ಕಷ್ಟಗಳು ಬರಲಿಲ್ಲವೇ? ಅಸುಗೂಸು ಹೆತ್ತ ತಾಯಿ ಇಂದ ದೊರವಾಗಿ ಬೆಳೆಯಬೇಕಾಯಿತಲ್ಲ, ಇದಕ್ಕಿಂತ ದೊಡ್ಡ ವಿಧಿ ಉಂಟೆ? ಇನ್ನು ಶ್ರೀ ರಾಮಕೃಷ್ಣ ಪರಮಹಂಸರನ್ನೇ ಈ ಸಮಾಜ ಹುಚ್ಚ ಎಂದ ವಿಚಿತ್ರ ದುರ್ದೈವವನ್ನು ನಾವು ಓದಿದ್ದೇವೆ, ಶ್ರೀ ಮಾತೆ ಅವರದ್ದು  ಸಂಪೂರ್ಣವಾದ ಯಾವ ಲೌಕಿಕ ಸುಖವನ್ನು ಕಾಣದ, ಬಯಸದ ತ್ಯಾಗಮಯಿ ಜೀವನ.. ಕೊನೆಯದಾಗಿ ಪ್ರಪಂಚದಲ್ಲೇ ಮೊಟ್ಟ ಮೊದಲು ಸಂನ್ಯಾಸತ್ವದಲ್ಲಿ ಸಾಕ್ಷಾತ್ಕಾರವನ್ನಷ್ಟೇ ಕಾಣದೆ, ಮೋಕ್ಷವನ್ನೇ ಗುರಿಯಾಗಿಸಿಕೊಳ್ಳದೆ, ಇಡೀ ದೇಶವನ್ನೇ ಮೇಲೆತ್ತುವ, ವೀರ ಸಂನ್ಯಾಸಿ ಎನಿಸಿದ ಸ್ವಾಮಿ ವಿವೇಕಾನಂದರು ಪಟ್ಟಿರುವ ಕಷ್ಟಗಳು ಕಡಿಮೆ ಏನಲ್ಲ,  ತನ್ನ ಸಂಗಡದ ಸಂನ್ಯಾಸಿಗಳ ಜೊತೆ ಎಷ್ಟೋ ದಿನ ಊಟವು ಇಲ್ಲದೆ, ನಾನಾಕಾರಣಗಳಿಂದ ಆದ  ಅದೆಷ್ಟೋ ದೇಹಬಾದೆಯನ್ನು ಮೀರಿ ಆತ್ಮಶಕ್ತಿಯನ್ನೇ ಮಹಾಶಕ್ತಿಯಾಗಿ ತೋರಿಸಿದ ಉದಾಹರಣೆಗಳು ನಮ್ಮೆದುರಿಗೆ ಇವೆ.. ಸದ್ಗುರು ಸಾಯಿಬಾಬ, ಮಹಾತ್ಮ ಗಾಂಧೀಜಿ, ನೆಲ್ಸನ್ ಮಂಡೇಲಾ, ಅಬ್ದುಲ್ ಕಲಾಂ..  ಹೀಗೆ ಅದೆಷ್ಟೋ ದೈವಿಕ ಸಾತ್ವಿಕರು, ಇವರೆಲ್ಲರನ್ನು ನಾವು ಮರೆಯುವಂತಿಲ್ಲ, ಇಂದಿಗೂ ಎಂದಿಗೂ ಅಜರಾಮರವಾಗಿರುವ ಇವರು ದೈವದತ್ತರು ಎಂಬುದು ಸತ್ಯ.. 
ಹೀಗಿರುವಾಗ ನಾವು ನಮ್ಮ ಜೀವನ,ಅದರ ಸ್ಥಿತಿಯನ್ನು ಯಾಕೆ ಯಾವಾಗಲೂ ಯಾರೋ ಬಾಹ್ಯವಾಗಿ ಚೆನ್ನಾಗಿ ಕಾಣುವವರೊಂದಿಗೆ ಹೋಲಿಸಿಕೊಳ್ಳುತ್ತೇವೆ.?  ದೇವರನ್ನೇ ಶಪಿಸುತ್ತೇವೆ, ಆದರೆ ಬಹಳಷ್ಟು ಕಷ್ಟಗಳು  ಬಂದಿರುವುದು, ಬರುವುದು ದೈವೀಭೂತರಿಗೆ ಹೊರತು ಸಾಮಾನ್ಯ ನರರಿಗಲ್ಲ. ಕಷ್ಟಗಳು, ಸಮಸ್ಯೆಗಳು ಬರುವುದು ಎದುರಿಸುವ ಶಕ್ತಿ ಇರುವವರಿಗೆ, ದೈವದ ಕೃಪೆಯಿರುವರಿಗೆ, ಶ್ರೇಷ್ಠವಂತರಿಗೆ. ಆದರಿಂದ ಇದು ನಮ್ಮ ಕರ್ಮ, ದುರದೃಷ್ಟ ಅಂತ ಅಂದುಕೊಳ್ಳುವುದೇ ವ್ಯರ್ಥ. ಸಾಮರ್ಥ್ಯ ಇರುವುದಕ್ಕೆ ಸಮಸ್ಯೆ, ಹೆಮ್ಮೆಯ ವಿಷಯ ಅಲ್ಲವೇ? ನಾನು ಬಹಳ ಸಂತೋಷದಿಂದ ಹೇಳುತ್ತೇನೆ, ಯುವ ಸಮೂಹ ಶ್ರೀ ರಾಮಕೃಷ್ಣ ವಿವೇಕಾನಂದ ಆಶ್ರಮದ ಅರಿವಿನ ಹರಿವು ಕಂಡುಕೊಂಡಿರುವವರು ಹೇಳುವ ಮಂತ್ರ - "ದೀನ ದೇವೋಭವ , ದರಿದ್ರ ದೇವೋಭವ , ರೋಗಿ ದೇವೋಭವ  , ಪಾಪಿ ದೇವೋಭವ ..."
ಈ ಲೇಖನವನ್ನು ಬರೆಯುವ ಮನಸ್ಸಾಗಿದರ ಉದ್ದೇಶ ಎಷ್ಟೋ ಮನೆಗಳಲ್ಲಿ ಮನಗಳಲ್ಲಿ ಲಾಸ್ಯತೆ ಮರೆಯಾಗಿ ಆಲಸ್ಯಗಳು, ಗೊಂದಲಗಳು,  ಮನಸ್ತಾಪಗಳು ಹೆಚ್ಚುತಿವೆ. ಈ ವಾತಾವರಣದಲ್ಲಿ ಮನೆಯಲ್ಲಿ ಎಲ್ಲರೊಂದಿಗೆ ಇರುವ ಅನಿವಾರ್ಯತೆ ಕೆಲವರಿಗೆ.. ಸರ್ವೇ ಸಾಮಾನ್ಯವಾಗಿ ಬೇಸರಗಳು ಇರುವಾಗ ಒಂದು ಸುತ್ತು ಹೊರಗೆ ಹೋಗಿಬಂದರೆ ಕಮ್ಮಿ ಆಗುವ ಜಾಯಮಾನ  ನಮ್ಮಲ್ಲಿ ಬಹಳಷ್ಟು ಮಂದಿಗೆ. ಆದರೆ ಅದು ಸಮಸ್ಯೆಗೆ ಯಾವತ್ತೂ ಶಾಶ್ವತವಾದ ಪರಿಹಾರ ಆಗಿರುವುದಿಲ್ಲ. ನಮ್ಮ ಸಂಸ್ಕಾರ ಒಟ್ಟಿಗೆ ಇದ್ದು ಎದುರಿಸುವುದೇ ಹೊರತು ದಿಕ್ಕಾಪಾಲಾಗುವುದಲ್ಲ. 
ಆತ್ಮೀಯರೇ ಅವರವರ ಪರಿಸ್ಥಿತಿಗಳು ಅವರವರಿಗೆ ತಿಳಿದಿರುತ್ತದೆಯೇ ಹೊರತು ಬೇರೆಯವರಿಗಲ್ಲ.. ಅದೇನೇ ಇರಲಿ 
  ನನ್ನದೆಂಬುದೇನಿಲ್ಲ, 
  ಇರುವುದು ನಿನ್ನದೆ ಎಲ್ಲ |
  ನಿನ್ನದು ನಿನಗೆ ಅರ್ಪಿಸುತಲಿ,
   ನೆಮ್ಮದಿಯಿಂದಿರುವೆ- ಕಬೀರಾ |
    ನೆಮ್ಮದಿಯಿಂದಿರುವೆ...
ಎಂದು ನಮ್ಮೆಲ್ಲಾ ಭಾವನೆಗಳು, ನೋವು - ನಲಿವುಗಳನ್ನ, ಅಸಮಾಧಾನಗಳನ್ನ ಕಾಣದ ಶಕ್ತಿಗೆ ಅರ್ಪಿಸಿ ನೆಮ್ಮದಿಯಿಂದ, ತೃಪ್ತಿಯಿಂದ, ಶಾಂತಿಯಿಂದ   ಬದುಕೂಣ...
Stay home stay safe...

ಇಂತಿ
ಪೃಥ್ವಿ ಎಂ ಎಲ್.  

Sunday, April 19, 2020

ಕೈ ಕೊಡದ ಗೆಳತಿ

                         
ಇವಳು 80ರ ದಶಕದವಳಂತೆ, ಆದರೂ ಈವರೆಗೆ ಯಾವತ್ತೂ ಕೈ ಕೊಟ್ಟಿಲ್ಲ. 80ರ ದಶಕ ಅಂದ ಕೂಡಲೇ ನನಗೆ ನಿಮಗೆ ಅನ್ನಿಸೋ ಸಾಮಾನ್ಯ ಸಂಗತಿ ಅಂದರೆ ಹೋ....  old generation ಅಂತ. ಖಂಡಿತ ಇವಳು old generationಲ್ಲಿ ಹುಟ್ಟಿದವಳೆ  ಆದರೆ ಈ ದಿನದ ಎಲ್ಲಾ new / modern generation ಅಲ್ಲಿ ಹುಟ್ಟಿದವರಿಗೆ compare ಮಾಡೋಕೆ ಆಗದ ಕಾರ್ಯವೈಖರಿ,  ವೈಶಿಷ್ಟ್ಯ ಇವಳದು.. 
ನನ್ನ potentiality ಕಮ್ಮಿ ಆದಾಗ ಪಕ್ಕದಲೇ ಇದ್ದು ಹೇಳ್ತಾಳೆ "ನಿನಗಿಂತ  old model ನಾನು ಇನ್ನು ಓಡ್ತಿದ್ದೀನಿ ನಿನಗೇನು ಆಗಿದೆ" ಅಂತ. ನನ್ನ ಸೊಂಬೇರಿತನ ಬಂದು ತಬ್ಬಿದಾಗ ಎಚ್ಚರಿಸುತ್ತಾಳ್ಳೆ "ನೀನು ಸೊಂಬೇರಿ ಆದ್ರೂ ನಿನಗಾಗಿ ನಾನು ನಿಲ್ಲಲ್ಲ " ಅಂತ. ಒಟ್ಟಿನಲ್ಲಿ ನನ್ನ ಜೊತೆ ಇವಳು ಇದ್ರೆ ಗೊತ್ತೋ ಗೊತ್ತಿಲ್ಲದೋ ಹಾಗೆ ನಾನು active.. 
ನಾನು ಈವರೆಗೂ ಹೇಳಿದ್ದೆಲ್ಲ ನಿಜವೇ, ಆದರೆ ಈ ನನ್ನ ಗೆಳತಿ humanbeing ಮಾತ್ರ ಅಲ್ಲ. "hmt  TARA" mechanical watch...  ಪಟ ಪಟ ಓಡೋ ಮುಳ್ಳು ಯಾವತ್ತೂ ನಿಂತಿಲ್ಲ, ಯಾವತ್ತೂ shell ಬೇಕು ಅಂತ ಕೇಳಿಲ್ಲ, ದಿನಕ್ಕೆ ಒಂದು ಸಾರಿ key ಕೊಟ್ಟರೆ ಸಾಕು. ನಾನು ನೋಡಿರದ ದಶಕದ ಅಪರೂಪದ ಸ್ನೇಹಿತೆ, ಸದ್ದೇ ಮಾಡದೆ ಬಲು ಆಪ್ತಳಾಗಿದ್ದಾಳೆ.. 

ಮನಸ್ಸು ಎಲ್ಲೋ ಕಳೆದು ಹೋದಾಗ ಸಮಯ ಹಿಂದಕ್ಕೆ ಬರಲ್ಲ ಅನ್ನೋ common sense ನ  ಒಂದೂ ಮಾತೆ ಆಡದೆ ತಿಳಿಸಿ ಎಲ್ಲೋ ಇರೋ ಮನಸ್ಸನ್ನು ಕರೆದು ಕೆಲಸಕ್ಕೆ ಹಚ್ಚುತ್ತಾಳೆ, ಅದೇ ಮನಸ್ಸು ಕುಗ್ಗಿ ಮೊಂಕಾದಾಗ "ನಾನು ಓಡಿ ಓಡಿ ನಿನ್ನ time ಬದಲಾಯಿಸುತ್ತಿನಿ" ಅಂತಾಳೆ.. 
ಒಟ್ಟಾರೆಯಾಗಿ ನಮ್ಮ ನೆಚ್ಚಿನ HMT COMPANY ಗುಣಮಟ್ಟಕೆ ಜೀವಂತ ಸಾಕ್ಷಿ ಆಗಿದ್ದಾಳೆ..

ಇಂತಿ
ಪೃಥ್ವಿ ಎಂ ಎಲ್ . 

Wednesday, April 1, 2020

ಚೈತನ್ಯದ ಚಿಲುಮೆ - ಡಾll ಶ್ರೀ ಶ್ರೀ ಶಿವಕುಮಾರ ಸ್ವಾಮಿಗಳು.


ಬಿಟ್ಟೆನೆಂದರೂ ಬಿಡದೀ ಮಾಯೆ!
ಬಿಡದಿದ್ದರೆ ಬೆಂಬತ್ತಿತ್ತು ಮಾಯೆ! ಯೋಗಿಗೆ ಯೋಗಿಣಿಯಾಯಿತ್ತು ಮಾಯೆ!
ಸವಣಂಗೆ ಸವಣಿಯಾಯಿತ್ತು ಮಾಯೆ!
ಯತಿಗೆ ಪರಾಕಿಯಾಯಿತ್ತು ಮಾಯೆ!
ನಿನ್ನ ಮಾಯೆಗೆ ನಾನಂಜುವವಳಲ್ಲ
ಚೆನ್ನ ಮಲ್ಲಿಕಾರ್ಜುನದೇವ, ನಿಮ್ಮಾಣೆ.....

ಎಂಬ ಅಕ್ಕ ಮಹಾದೇವಿಯವರ ವಚನದಂತೆ ಯಾವ ಲೌಕಿಕ ಮಾಯೆಗೂ ಸಿಲುಕದೆ ಕೇವಲ ಸಮಾಜದ ಏಳಿಗೆಗೆ ಶ್ರದ್ಧೆಯಿಂದ ದುಡಿಯುತ್ತಿರುವ, ಕಾಯಕವೇ ಕೈಲಾಸ ಎಂಬ ಮಾತನ್ನು ಕಾಯಾ, ವಾಚಾ, ಮನಸಾ ಪಾಲಿಸುತ್ತಿರುವ ನಮ್ಮ ತುಮಕೂರಿನ ಶ್ರೀ ಸಿದ್ಧಗಂಗಾ ಮಠದ ಶತಾಯುಷಿಗಳು, ಶಿವಸ್ವರೂಪಿಗಳು, ತ್ರಿವಿಧ ದಾಸೋಹಿಗಳು, ನಿರಂಜನ ಪ್ರಣವ ಸ್ವರೂಪಿ ಡಾ|| ಶ್ರೀ ಶ್ರೀ ಶ್ರೀ ಶಿವಕುಮಾರ ಮಹಾ ಸ್ವಾಮಿಗಳ ಬಗ್ಗೆ ಅಂಕಣವನ್ನು ಬರೆಯಲು ಕಣ್ತುಂಬಿ ಬರುತ್ತಿದೆ, ಜೊತೆಗೆ ಯೋಚನೆಯು ಕಾಡುತ್ತಿದೆ, ಊಹಿಸಲಾಗದ ಔದಾರ್ಯ, ಬಣ್ಣಿಸಲಾಗದ ವ್ಯಕ್ತಿತ್ವ, ಮಾತಿಗೆ ನಿಲುಕದ ಸಾಧನೆ, ಶಿವನನ್ನೆ ಮೆಚ್ಚಿಸುವಂತಹ ಶ್ರದ್ಧೆ, ಯಂತ್ರದಂತೆ ತೊಡಗಿಸಿಕೊಳ್ಳುವ ಕಾಯಕ ನಿಷ್ಠೆ, ಋಣವಷ್ಟೂ ಸ್ವಾರ್ಥ ಕಾಣಾದ ಮುಗ್ಧ ಮುಖ, ತೇಜಸ್ಸಿನಿಂದ ಹೊಳೆಯುವ ಕಣ್ಣುಗಳು, ಕೈಯಲ್ಲಿ ಬೆತ್ತ, ನಿರರ್ಗಳವಾದ ಮಾತು........ ಇಷ್ಟೇ ಅಲ್ಲ ಬರೆಯಲು, ತಿಳಿಯಲು ಇನ್ನು ಎಷ್ಟೋ.! ಅದು ನಮ್ಮ ಬುದ್ಧಿಯೋರ ಬಗ್ಗೆ ಈ ನನ್ನ ಪುಟ್ಟ ಅಂಕಣದಲ್ಲಿ ಹೇಗೆ ಬರೆಯಲಿ ಎಂಬ ಯೋಚನೆ ಕಾಡುತ್ತಿದೆ.

1908ನೇ ಇಸವಿ ಏಪ್ರಿಲ್ 01, ಬ್ರಾಹ್ಮಿ ಮುಹೂರ್ತದ ದಿವ್ಯ ಸಮಯ, ಭುವಿಗೆ ಭಾಗ್ಯದ ಸಿರಿಯಂತೆ ಕಾಯಕ ಗುರುಗಳ ಜನನವಾದ ಹರ್ಷೊಚ್ಚರಿತ ದಿನ. ಬಾಲಕ ಶಿವಣ್ಣ ಬೆಳೆದಂತೆ ಎಲ್ಲರ ಬಾಯಲ್ಲೂ ಬಾಲ ಸಿದ್ಧಯೋಗಿಯಂತೆ ಇದ್ದಾನೆ ಎಂಬ ಮಾತು ಕೇಳಿ ಬರುತ್ತಿತ್ತು. ಬೆಂಗಳೂರು ಜಿಲ್ಲೆಯ(ಸದ್ಯ ರಾಮನಗರ ಜಿಲ್ಲೆ) ಮಾಗಡಿ ತಾಲ್ಲೂಕಿನ ವೀರಾಪುರ ಶಿವಣ್ಣನ ಹುಟ್ಟೂರು. ತಾಯಿ ಗಂಗಮ್ಮ ಸದ್ಗ್ರಹಿಣಿ, ತಂದೆ ಹೊನ್ನಪ್ಪ, ಕೃಷಿ ಕಾಯಕದಿಂದ ತುಂಬು ಜೀವನ ನಡೆಸುತ್ತಿದ್ದಂತಹ, ಊರಿನ ಜನರ ಕಷ್ಟದಲ್ಲಿ  ಬಹಳಷ್ಟು ನೆರೆವಾಗುವ ಕುಟುಂಬದವರು ಶಿವಣ್ಣನ ಆಟ-ಪಾಠ ವಿನಯ ವೈಚಾರಿಕತೆ ತಾಯಿಗೆ ಬಹಳ ಸಂತಸ ತಂದಿತ್ತು ಪ್ರೀತಿಯ ಮಗ ಶಿವಣ್ಣನಿಗೆ ಒಂದು ದಿನ ಎಂದಿನಂತೆ ಆಟ ಆಡಿ ಮನೆಗೆ ಹಿಂತಿರುಗುವಾಗ ಅಘಾತದ ಸುದ್ದಿ ಕಾದಿತ್ತು ಮಮತೆಯ ಮಡಿಲು ವಾತ್ಸಲ್ಯದ ಧಾರೆ ಎರೆದ ತಾಯಿ ಕಾಲಾವಶವಾಗಿದ್ದರು. ಆ ಎಂಟು ವರ್ಷದ ಬಾಲಕನ ನೋವು ದುಃಖ, ಕಣ್ಣೀರು, ಸಂಕಟ ನೋಡಲಾಗುತ್ತಿರಲಿಲ್ಲ ನಂತರ ಶಿವಣ್ಣನ ಅಕ್ಕ ಪುಟ್ಟಹೊನ್ನಮ್ಮ  ತಾಯಿಯಂತೆ ಸಲಹಿದರು ಭಾವ ಗಂಗೆ ಗೌಡರು ಮಮತಾಮಹಿಗಳಾಗಿದ್ದರು ತದಕಾರಣ ಶಿಕ್ಷಣ ನಾಗವಲ್ಲಿ ಮುಂದುವರೆಯಿತು.

1919 ರಲ್ಲಿ ಕನ್ನಡ ಲೋಯರ್ ಸೆಕಂಡರಿ ಪರೀಕ್ಷೆ ಮತ್ತು 1922 ರಲ್ಲಿ ಇಂಗ್ಲೀಷ್ ಲೋಯರ್ ಸೆಕಂಡರಿ ಪರೀಕ್ಷೆಯಲ್ಲಿ ತೇರ್ಗಡೆಯಾಗಿ ತುಮಕೂರಿನ ಸರಕಾರಿ ಪ್ರೌಢ ಶಾಲೆಯಲ್ಲಿ ಓದುತ್ತಿರುವಾಗ ಒಮ್ಮೆ 1927 ರಲ್ಲಿ ಇಡೀ ನಗರ ಪ್ಲೇಗ್ ರೋಗದಿಂದ ಆವರಿಸಿದ್ದ ಕಾರಣ ವಿದ್ಯಾಭ್ಯಾಸಕ್ಕೆ ತೊಂದರೆಯಾಗಿತ್ತು ಶ್ರೀಮಠದಲ್ಲಿ ವಸತಿಗಾಗಿ ಶ್ರೀ ಉದ್ಧಾನ ಶಿವಯೋಗಿಗಳಲ್ಲಿ ಆಶ್ರಯ ಕೋರಿ ಮನವಿ ಸಲ್ಲಿಸಿದರು ಮೊದಲಿಗೆ ಗುರುಗಳು ಕಟುವಾಗಿಯೆ ಸಾಧ್ಯವಿಲ್ಲ ಎಂದರು ಆಗ ಬೇರೆ ವಿಧಿಯಿಲ್ಲದೆ ತುಮಕೂರಿನ ಶೆಟ್ಟಿಹಳ್ಳಿಯ ಅಲ್ಲಿ ಒಂದು ಪುಟ್ಟ ಕೋಣೆ ಪಡೆದು ಶಿವಣ್ಣ ತನ್ನ ವಿದ್ಯಾಭ್ಯಾಸ ಮುಂದುವರಿಸಬೇಕಾಗಿತ್ತು ಪರೀಕ್ಷೆ ಸಮಯ ಬಹಳ ಕಷ್ಟದ ಪರಿಸ್ಥಿತಿ ಆಗಿತ್ತು ಇದನ್ನರಿತು ವರ ಕೊಟ್ಟಂತೆ ಶ್ರೀ ಉದ್ಧಾನ ಶಿವಯೋಗಿಗಳು ಆಶ್ರಯ ಕೊಟ್ಟರು ಆಗ ಶ್ರೀಮಠದಲ್ಲಿ ಶಿವಣ್ಣನವರ ಆಪ್ತಸ್ನೇಹಿತ ಕಾಳಪ್ಪನವರು ಸಹ ಅವರೊಂದಿಗೆ ಆಶ್ರಯ ಪಡೆದರು ಶ್ರೀಮಠದ ಆಗಿನ ಉತ್ತರಾಧಿಕಾರಿಗಳಾಗಿ ಶ್ರೀ ಮರುಳಾರಾಧ್ಯರೂಂದಿಗೂ ಇವರೀರ್ವರಿಗೂ ವಿಶೇಷ ಬಾಂಧವ್ಯ ಪರಸ್ಪರ ಗೌರವ ಬೆಳದಿತ್ತು ತಮ್ಮ ಹೆಚ್ಚಿನ ಶಿಕ್ಷಣಕ್ಕಾಗಿ ಶಿವಣ್ಣನವರು 1930 ಜನವರಿಯಲ್ಲಿ ಭೌತವಿಜ್ಞಾನ ಮತ್ತು ಗಣಿತ ಐಚ್ಚಿಕ ವಿಷಯವಾಗಿ ಆಯ್ಕೆ ಮಾಡಿಕೊಂಡು ಬೆಂಗಳೂರಿನ ಸೆಂಟ್ರಲ್ ಕಾಲೇಜಿನಲ್ಲಿ ಓದುತ್ತಿದ್ದರು ಯಾವ ಆಧುನಿಕ ವಿಲಕ್ಷಣಗಳಿಗೂ ಓಗೊಡದೆ ತಮ್ಮ ಸಾತ್ವಿಕ ಸಂಸ್ಕೃತಿಯನ್ನು ಕಾಪಾಡಿಕೊಂಡೇ ಬೆಂಗಳೂರಿನ ತೋಟದಪ್ಪ ವಿದ್ಯಾರ್ಥಿ ನಿಲಯದಲ್ಲಿ ಓದುತ್ತಿದ್ದರು ಅಲ್ಲಿಯೂ ದಿನವೂ ಬೆಳಗಿನ ಜಾವ 4:00 ಗಂಟೆಗೆ ಶಿವಣ್ಣನ ದಿನಚರಿ ಪ್ರಾರಂಭವಾಗುತ್ತಿತ್ತು ದಿನನಿತ್ಯ ತಣ್ಣೀರಿನ ಸ್ನಾನ, ಶಿವಪೂಜೆ, ಓದು ಯಥಾವತ್ತಾಗಿ ಯಾವ ಅಡೆತಡೆ ಇಲ್ಲದೆ ನಡೆಯುತ್ತಿತ್ತು ಹೀಗಿರುವಾಗ ಅದೇ ವರ್ಷ ಜನವರಿಯ 16ನೇ ತಾರೀಕು ಶ್ರೀ ಮರುಳಾರಾಧ್ಯ ಶಿವ್ಯಕ್ಯರಾದ ಸುದ್ದಿ ಶಿವಣ್ಣನವರಿಗೆ ತಿಳಿಯಿತು. ಸುದ್ದಿ ಕೇಳಿ ದುಃಖಿತರಾದ ಶಿವಣ್ಣನವರು ತಕ್ಷಣವೇ ಸಿದ್ದಗಂಗಾ ಮಠಕ್ಕೆ ಧಾವಿಸಿದರು, ಶ್ರೀ ಮರುಳಾರಾಧ್ಯರ ಸಮಾಧಿ ಕಾರ್ಯ ಮುಗಿಸಿ ಶ್ರೀಗಳ ಪಾದ ಪೂಜೆಯಲ್ಲಿ ತೊಡಗಿದ್ದ ಶಿವಣ್ಣರನ್ನು ಕಂಡ ಭಕ್ತ ಸಮೂಹ ಶಿವಣ್ಣನವರೇ ಮುಂದಿನ ಉತ್ತರಾಧಿಕಾರಿಯಾಗಲು ಸೂಕ್ತ ಎಂದಿದ್ದರು. ಇತ್ತ ಶ್ರೀ ಉದ್ಧಾನ ಶಿವಯೋಗಿಗಳ ಕಣ್ಣುಗಳು ತನ್ನ ಭಾವ ಸಮಾಧಿಯಲ್ಲಿ ಕಂಡಿದ್ದ ಉತ್ತರಾಧಿಕಾರಿಯಾಗಲು ಯೋಗ್ಯವಾದ ಬಾಲ ಶಿವಯೋಗಿಯನ್ನು ಹುಡುಕುತಿದ್ದವು. ಶಿವಣ್ಣನನ್ನು ಕಂಡ ಶಿವಯೋಗಿಗಳು "ಶಿವಣ್ಣ ಶ್ರೀ ಮಠದ ಉತ್ತರಾಧಿಕಾರವನ್ನು ನೀನು ವಹಿಸಿಕೊಳ್ಳಬೇಕು" ಎಂದೊಡನೆ ಮರುಮಾತಿಲ್ಲದೆ ಶಿವಣ್ಣನವರು ಗುರು ಆಜ್ಞೆಯನ್ನು ಒಪ್ಪಿ ಅವರ ಪಾದಗಳಿಗೆ ನಮಸ್ಕರಿಸಿದರು. ಶ್ರೀ ಉದ್ಧಾನ ಶಿವಯೋಗಿಗಳು ಶಕ್ತಿ ಅದ್ಭುತವಾದುದಾಗಿತ್ತು, ಆ ಶಕ್ತಿಯ ಮುಂದೆ ಯಾವ ಆಲೋಚನೆಗಳು ಇರಲು ಸಾಧ್ಯವಾಗಲಿಲ್ಲ.

1930 ನೇ ಇಸವಿ ಮಾರ್ಚ್ ತಿಂಗಳ 3 ನೇ ತಾರೀಖು ಶ್ರೀ ಗೋಸಲ ಸಿದ್ದೇಶ್ವರರಿಂದ ಸಂಸ್ಥಾಪಿತವಾದ, ಮಹಾ ಪರಂಪರೆಯುಳ್ಳ ಶ್ರೀ ಸಿದ್ದಗಂಗಾ ಮಠದಲ್ಲಿ ಸಂತೋಷ ತುಂಬಿತುಳುಕುತ್ತಿತ್ತು. ಏಕೆಂದರೆ ಆ ಶುಭದಿನದಂದು ಶ್ರೀ ಉದ್ಧಾನ ಶಿವಯೋಗಿಗಳು ಶಿವಣ್ಣನವರಿಗೆ ಶ್ರೀ ಶ್ರೀ ಶಿವಕುಮಾರ ಸ್ವಾಮಿಗಳೆಂದು ನಿರಂಜನ ಜಂಗಮಾಧಿಕಾರವನ್ನು ಆಶೀರ್ವದಿಸಿದ್ದರು ಅಂದಿನಿಂದ ಇಂದಿನವರೆಗೆ ಶ್ರೀ ಶಿವಕುಮಾರ ಸ್ವಾಮಿಗಳಿಂದ ಗುರುಗಳ  ಇಚ್ಛೆಯಂತೆ ಅನ್ನ ಹಾಗೂ ಜ್ಞಾನ ದಾಸೋಹದ ಜ್ಯೋತಿ ಆರಿಲ್ಲ.

ಹಿಂದಿನ ದಿನಗಳಲ್ಲಿ ಮಠದ ಆದಾಯ ತುಂಬಾ ಕಡಿಮೆ ಇತ್ತು, ಬರುವ ಭಕ್ತರ ಸಂಖ್ಯೆ ಹೆಚ್ಚುತ್ತಿತ್ತು ಹೀಗಿರುವಾಗ 10 ದಿನದಿಂದ ತಿಂಗಳುಗಳವರೆಗೆ ಸ್ವಾಮಿಗಳು ತಮ್ಮ ಹಿರಿಯರ ಪರಂಪರೆಯಂತೆ ಜೋಳಿಗೆ ಹಿಡಿದು ಬೀದಿಬೀದಿ ಸುತ್ತಿ ಮಠದಲ್ಲಿನ ಹಸಿದ ಜೀವಿಗಳಿಗೆ ದಾಸೋಹವನ್ನು ಪೂರೈಸಿದ್ದರು.1917 ರಲ್ಲಿ ಶ್ರೀ ಉದ್ಧಾನ ಶಿವಯೋಗಿಗಳಿಂದ ವಿದ್ಯಾದಾನ ಆರಂಭಗೊಂಡಿತ್ತು. ಮೊದಲಿಗೆ ಸಂಸ್ಕೃತ ಪಾಠಶಾಲೆಯ 53 ವಿದ್ಯಾರ್ಥಿಗಳಿಂದ ಕೂಡಿದಾಗಿ ವಿದ್ಯಾರ್ಥಿಗಳ ಪೋಷಣೆ ದಿನ ನಿತ್ಯ ಬರುವ ಭಕ್ತಾದಿಗಳ ಊಟ, ದೇವಾಲಯಗಳ ಪೂಜಾ ನಿಯಮ ನಿಭಾಯಿಸುವುದು ಅಂದು ಶ್ರೀ ಶಿವಕುಮಾರ ಸ್ವಾಮಿಗಳಿಗೆ ಸುಲಭದ ಮಾತಾಗಿರಲಿಲ್ಲ. ಎಷ್ಟೋ ಬಾರಿ ಬುದ್ಧಿಯವರು ಕೆಲ ಭಕ್ತರು ಪಾದ ಪೂಜೆ, ಶಿವ ಪೂಜೆಗೆ ಆಹ್ವಾನಿಸಿದಾಗ ಹತ್ತಾರು ಮೈಲಿಗಳ ದೂರ ನೆಡೆದೇ ಸಾಗಿದ್ದು ಉಂಟು, ಬಂದ ಆದಾಯದಲ್ಲಿ ನಿಭಾಯಿಸುತ್ತಿದ್ದರು. ಅದೊಂದು ಸಂದರ್ಭ, ಶ್ರೀ ಶಿವಕುಮಾರ ಸ್ವಾಮಿಗಳು  ಉತ್ತರಾಧಿಕಾರ ಪಡೆದ ಕೆಲವು ವಾರಗಳಲ್ಲಿ ಶ್ರೀ ಉದ್ಧಾನ ಶಿವಯೋಗಿಗಳ ಶಿವಗಣಾರಾಧನೆ ಮಾಡಬೇಕಿತ್ತು,ಮಠದಲ್ಲಿದ್ದ 300 ರೂಗಳು ಹಾಗೂ ಭಕ್ತರ ಸಹಕಾರದಿಂದ ಕಾರ್ಯವನ್ನು  ಮುಗಿಸಿದಗಿತ್ತು, ಮುಂದೇನು ಎಂದು ಶ್ರೀಗಳು ಯೋಚಿಸುತ್ತಿರುವಾಗ ಮಠದ ಭಕ್ತರಾದ ಚಿಕ್ಕಣ್ಣನವರ ಅಂದು ತಟ್ಟನೆ ಬಂದು ಮಠಕ್ಕೆ ಖರ್ಚು ಬಹಳಷ್ಟಿದೆ ಎಂದು ಹೇಳಿ ನಾನು 4000 ರೂಗಳನ್ನು ಕೊಟ್ಟಿದ್ದರು, ಅದರ ಅರ್ಧದಷ್ಟನ್ನು ದಾನ  ಮಾಡಿ ಮಿಕ್ಕ ಹಣದಲ್ಲಿ ಶ್ರೀಗಳು ವಿದ್ಯಾ ದಾಸೋಹ, ಅನ್ನದಾಸೋಹವನ್ನು ಮುಂದುವರೆಸಿದರು,  ಇದೇ ಶ್ರೀಗಳಿಗೆ ಮೂಲ ಬಂಡವಾಳ ವಾಯಿತು. ಅಂದಿನಿಂದ ಎಷ್ಟು ಭಕ್ತರಿಂದ ಶ್ರೀಮಠಕ್ಕೆ ಧವಸ, ಧಾನ್ಯ, ಕಾಳು, ತರಕಾರಿ, ಹಣದ ಮಹಾಪೂರವೇ ಹರಿದು ಬರುವುದು ಸಾಮಾನ್ಯವಾಯಿತು.

ಕೇವಲ 53 ವಿದ್ಯಾರ್ಥಿಗಳಿಂದ ವಿದ್ಯಾ ದಾಸೋಹ 2007ರಲ್ಲಿ 10,000 ಮೀರಿತು. ಇಂದು ಇದರ ಸಂಖ್ಯೆ 50,000 ಕ್ಕೂ ಹೆಚ್ಚಿದೆ. ಯಾವುದೇ ಜಾತಿ, ಧರ್ಮ, ಜನಾಂಗಗಳನ್ನು ಪರಿಗಣಿಸದೇ ಸದುದ್ದೇಶದಿಂದ ಬಡ ಮಕ್ಕಳ ಶಿಕ್ಷಣ ಕಲಿಕೆಯ ಹಂಬಲಕ್ಕೆ ಶ್ರೀಮಠ ಕೈಬೀಸಿ ಕರೆಯುವ, ಬಾಚಿ ತಬ್ಬುವ ವಿದ್ಯಾ ದೇಗುಲವಾಗಿದೆ. ಶ್ರೀಮಠದ ಶಾಲಾ-ಕಾಲೇಜುಗಳು ಇಡೀ ರಾಜ್ಯದಲ್ಲಿ ವಿದ್ಯೆಯ ಬೆಳಕನ್ನು ಪಸರಿಸುತ್ತವೆ. ಸಾವಿರಾರು ವಿದ್ಯಾರ್ಥಿಗಳು ದೇಶ-ವಿದೇಶಗಳಲ್ಲಿ  ಶ್ರೀ ಮಠದ ಕೀರ್ತಿಯನ್ನು ಬೆಳಗಿದ್ದಾರೆ. ಇನ್ನೂ ಶ್ರೀ ಮಠದ ದಾಸೋಹ ಇಂದು ಬಹಳ ಹಿರಿಯದ್ದು, ದಿನಕ್ಕೆ ಸರಾಸರಿ ಹತ್ತು ಸಾವಿರ ಮಂದಿಗೂ ಹೆಚ್ಚು ಬಿಡುವಿಲ್ಲದೆ ಪ್ರಸಾದ ಬಡಿಸುವ ಔದಾರ್ಯ ನಮಗೆ ಕಾಣುತ್ತದೆ. ಇಲ್ಲಿ ಯಾವುದೇ ಭೇದವಿಲ್ಲದೆ ಹಸಿದು ಬಂದವರಿಗೆ ಇಲ್ಲ ಎನ್ನದೆ ಪ್ರಸಾದದ ಸಂತೃಪ್ತಿಯನ್ನು ಕೊಡುವ ಪದ್ಧತಿ ವಿಭಿನ್ನ ಎನಿಸುತ್ತದೆ. ತನ್ನೂಡಲಲ್ಲಿ ಇರುವ ಮಕ್ಕಳಿಗೆ ವಿದ್ಯೆಯ ಜೊತೆಗೆ ಪ್ರಾರ್ಥನಾ ಭಾವ, ಸುಸಂಸ್ಕೃತ ನಡತೆ, ಸಾತ್ವಿಕತೆ, ವೈಚಾರಿಕತೆಗಳನ್ನೂ ನೀಡುತ್ತಿದೆ. ಇಷ್ಟಾದರೂ ನಮ್ಮ  ಬುದ್ಧಿಯವರು ಅದೇ ಮುಗ್ಧತೆಯಲ್ಲಿ, ಕಾಯಕ ನಿಷ್ಠೆಯಲ್ಲಿ ಕಾಣಸಿಗುತ್ತಾರೆ. ಏಷ್ಟು ಹೇಳಿದರು ಬರೆದರೂ ಕಡಿಮೆಯೇ ಎಂಬ ಭಾವ ನನಗಿದೆ. ಇದಲ್ಲವೇ ಶ್ರೀ ಸಿದ್ಧಗಂಗೆಯ ವೈಶಿಷ್ಟ್ಯ.......
ಇದನ್ನೇ ಕಂಡು  ಇರಬೇಕು ಪೂಜ್ಯ ಶ್ರೀಗಳನ್ನು "ನಡೆದಾಡುವ ದೇವರು" ಎಂದಿದ್ದು, ದೇವರಿಗಿಂತ ದೊಡ್ಡ ಪದ ನಮಗೆ ಎಲ್ಲಿ ಸಿಗಲು ಸಾಧ್ಯ, ಹೌದು ದೇವರು  ಇವರು. ನಿಮ್ಮನ್ನು ಕಾಣುತ್ತಿರುವ, ಆಶೀರ್ವಾದದ ನೆಲದಲ್ಲಿರುವ ನಾವು ನಿಜಕ್ಕೂ ಪುಣ್ಯವಂತರು. ಏಕೆಂದರೆ ನಿಮ್ಮ ದಿವ್ಯದೃಷ್ಟಿಯಿಂದಲೇ ಸಕಲ ಕಷ್ಟಗಳು ದೂರವಾಗುತ್ತದೆ, ನಿಮ್ಮಪಾದಸ್ಪರ್ಶದಿಂದ ನವಚೈತನ್ಯ ನವಿರೇಳುತ್ತದೆ. ನಿಮ್ಮನ್ನು ನೆನೆದೊಡನೆ ಎಂಥ ಸೋಮಾರಿತನವಿದ್ದರೂ ಮಾಯವಾಗುತ್ತದೆ ನಿಮ್ಮ ಕಾರ್ಯ- ಕಾಯಕಗಳಲ್ಲಿ ಸನ್ನಧ್ದರಾಗುವ ಹುರುಪು ಮೂಡುತ್ತದೆ, ಇಂದು ಎಂದು ನಮ್ಮ ಶಕ್ತಿ ‌ ನೀವಾಗಿರುತ್ತೀರಿ, ನಮ್ಮ ಭಕ್ತಿ ನಿಮಗಾಗಿರುತ್ತದೆ, ನಮ್ಮ ಧ್ಯಾನದಲ್ಲಿ ನೀವಿರುತ್ತೀರಿ, ನಮ್ಮಲ್ಲಿ ನಮ್ಮೆಲ್ಲರ "ಚೈತನ್ಯದ ಚಿಲುಮೆ" ನೀವು... ಕೊನೆಯದಾಗಿ ಮಾನ್ಯ ರಾಷ್ಟ್ರಕವಿ ಡಾ. ಜಿ. ಎಸ್. ಶಿವರುದ್ರಪ್ಪನವರ ಪದ್ಯದ ನನ್ನ ಮೆಚ್ಚಿನ ನಾಲ್ಕು ಸಾಲುಗಳು


"ಸದ್ದು ಗದ್ದಲ ವಿರದ ಸಾಧನೆ ಇಲ್ಲಿ ಗದ್ದುಗೆಯೇರಿದೆ|
ಕಾಯಕವೇ ಕೈಲಾಸವೆನ್ನುವ ಮಾತು ಕೃತಿಯೊಳು ಮೂಡಿದೆ|
ಕಾವಿಯುಡುಗೆಯನುಟ್ಟು ನಭವೇ ಕಿರಣ‌ ಹಸ್ತವ ಚಾಚಿದೆ|
ಎಲ್ಲ ‌ ನನ್ನವರೆನುವ ಭಾವದ ಕರುಣೆಯೇ ಕಣ್ತೆರೆದಿದೆ|"

ಧನ್ಯ ಭಾವದಿಂದ  ಭಾವಪೂರ್ವಕ ವಂದನೆಗಳು


ಪೃಥ್ವಿ ಎಂ ಎಲ್.