ಬಿಟ್ಟೆನೆಂದರೂ ಬಿಡದೀ ಮಾಯೆ!
ಬಿಡದಿದ್ದರೆ ಬೆಂಬತ್ತಿತ್ತು ಮಾಯೆ! ಯೋಗಿಗೆ ಯೋಗಿಣಿಯಾಯಿತ್ತು ಮಾಯೆ!
ಸವಣಂಗೆ ಸವಣಿಯಾಯಿತ್ತು ಮಾಯೆ!
ಯತಿಗೆ ಪರಾಕಿಯಾಯಿತ್ತು ಮಾಯೆ!
ನಿನ್ನ ಮಾಯೆಗೆ ನಾನಂಜುವವಳಲ್ಲ
ಚೆನ್ನ ಮಲ್ಲಿಕಾರ್ಜುನದೇವ, ನಿಮ್ಮಾಣೆ.....
ಎಂಬ ಅಕ್ಕ ಮಹಾದೇವಿಯವರ ವಚನದಂತೆ ಯಾವ ಲೌಕಿಕ ಮಾಯೆಗೂ ಸಿಲುಕದೆ ಕೇವಲ ಸಮಾಜದ ಏಳಿಗೆಗೆ ಶ್ರದ್ಧೆಯಿಂದ ದುಡಿಯುತ್ತಿರುವ, ಕಾಯಕವೇ ಕೈಲಾಸ ಎಂಬ ಮಾತನ್ನು ಕಾಯಾ, ವಾಚಾ, ಮನಸಾ ಪಾಲಿಸುತ್ತಿರುವ ನಮ್ಮ ತುಮಕೂರಿನ ಶ್ರೀ ಸಿದ್ಧಗಂಗಾ ಮಠದ ಶತಾಯುಷಿಗಳು, ಶಿವಸ್ವರೂಪಿಗಳು, ತ್ರಿವಿಧ ದಾಸೋಹಿಗಳು, ನಿರಂಜನ ಪ್ರಣವ ಸ್ವರೂಪಿ ಡಾ|| ಶ್ರೀ ಶ್ರೀ ಶ್ರೀ ಶಿವಕುಮಾರ ಮಹಾ ಸ್ವಾಮಿಗಳ ಬಗ್ಗೆ ಅಂಕಣವನ್ನು ಬರೆಯಲು ಕಣ್ತುಂಬಿ ಬರುತ್ತಿದೆ, ಜೊತೆಗೆ ಯೋಚನೆಯು ಕಾಡುತ್ತಿದೆ, ಊಹಿಸಲಾಗದ ಔದಾರ್ಯ, ಬಣ್ಣಿಸಲಾಗದ ವ್ಯಕ್ತಿತ್ವ, ಮಾತಿಗೆ ನಿಲುಕದ ಸಾಧನೆ, ಶಿವನನ್ನೆ ಮೆಚ್ಚಿಸುವಂತಹ ಶ್ರದ್ಧೆ, ಯಂತ್ರದಂತೆ ತೊಡಗಿಸಿಕೊಳ್ಳುವ ಕಾಯಕ ನಿಷ್ಠೆ, ಋಣವಷ್ಟೂ ಸ್ವಾರ್ಥ ಕಾಣಾದ ಮುಗ್ಧ ಮುಖ, ತೇಜಸ್ಸಿನಿಂದ ಹೊಳೆಯುವ ಕಣ್ಣುಗಳು, ಕೈಯಲ್ಲಿ ಬೆತ್ತ, ನಿರರ್ಗಳವಾದ ಮಾತು........ ಇಷ್ಟೇ ಅಲ್ಲ ಬರೆಯಲು, ತಿಳಿಯಲು ಇನ್ನು ಎಷ್ಟೋ.! ಅದು ನಮ್ಮ ಬುದ್ಧಿಯೋರ ಬಗ್ಗೆ ಈ ನನ್ನ ಪುಟ್ಟ ಅಂಕಣದಲ್ಲಿ ಹೇಗೆ ಬರೆಯಲಿ ಎಂಬ ಯೋಚನೆ ಕಾಡುತ್ತಿದೆ.
1908ನೇ ಇಸವಿ ಏಪ್ರಿಲ್ 01, ಬ್ರಾಹ್ಮಿ ಮುಹೂರ್ತದ ದಿವ್ಯ ಸಮಯ, ಭುವಿಗೆ ಭಾಗ್ಯದ ಸಿರಿಯಂತೆ ಕಾಯಕ ಗುರುಗಳ ಜನನವಾದ ಹರ್ಷೊಚ್ಚರಿತ ದಿನ. ಬಾಲಕ ಶಿವಣ್ಣ ಬೆಳೆದಂತೆ ಎಲ್ಲರ ಬಾಯಲ್ಲೂ ಬಾಲ ಸಿದ್ಧಯೋಗಿಯಂತೆ ಇದ್ದಾನೆ ಎಂಬ ಮಾತು ಕೇಳಿ ಬರುತ್ತಿತ್ತು. ಬೆಂಗಳೂರು ಜಿಲ್ಲೆಯ(ಸದ್ಯ ರಾಮನಗರ ಜಿಲ್ಲೆ) ಮಾಗಡಿ ತಾಲ್ಲೂಕಿನ ವೀರಾಪುರ ಶಿವಣ್ಣನ ಹುಟ್ಟೂರು. ತಾಯಿ ಗಂಗಮ್ಮ ಸದ್ಗ್ರಹಿಣಿ, ತಂದೆ ಹೊನ್ನಪ್ಪ, ಕೃಷಿ ಕಾಯಕದಿಂದ ತುಂಬು ಜೀವನ ನಡೆಸುತ್ತಿದ್ದಂತಹ, ಊರಿನ ಜನರ ಕಷ್ಟದಲ್ಲಿ ಬಹಳಷ್ಟು ನೆರೆವಾಗುವ ಕುಟುಂಬದವರು ಶಿವಣ್ಣನ ಆಟ-ಪಾಠ ವಿನಯ ವೈಚಾರಿಕತೆ ತಾಯಿಗೆ ಬಹಳ ಸಂತಸ ತಂದಿತ್ತು ಪ್ರೀತಿಯ ಮಗ ಶಿವಣ್ಣನಿಗೆ ಒಂದು ದಿನ ಎಂದಿನಂತೆ ಆಟ ಆಡಿ ಮನೆಗೆ ಹಿಂತಿರುಗುವಾಗ ಅಘಾತದ ಸುದ್ದಿ ಕಾದಿತ್ತು ಮಮತೆಯ ಮಡಿಲು ವಾತ್ಸಲ್ಯದ ಧಾರೆ ಎರೆದ ತಾಯಿ ಕಾಲಾವಶವಾಗಿದ್ದರು. ಆ ಎಂಟು ವರ್ಷದ ಬಾಲಕನ ನೋವು ದುಃಖ, ಕಣ್ಣೀರು, ಸಂಕಟ ನೋಡಲಾಗುತ್ತಿರಲಿಲ್ಲ ನಂತರ ಶಿವಣ್ಣನ ಅಕ್ಕ ಪುಟ್ಟಹೊನ್ನಮ್ಮ ತಾಯಿಯಂತೆ ಸಲಹಿದರು ಭಾವ ಗಂಗೆ ಗೌಡರು ಮಮತಾಮಹಿಗಳಾಗಿದ್ದರು ತದಕಾರಣ ಶಿಕ್ಷಣ ನಾಗವಲ್ಲಿ ಮುಂದುವರೆಯಿತು.
1919 ರಲ್ಲಿ ಕನ್ನಡ ಲೋಯರ್ ಸೆಕಂಡರಿ ಪರೀಕ್ಷೆ ಮತ್ತು 1922 ರಲ್ಲಿ ಇಂಗ್ಲೀಷ್ ಲೋಯರ್ ಸೆಕಂಡರಿ ಪರೀಕ್ಷೆಯಲ್ಲಿ ತೇರ್ಗಡೆಯಾಗಿ ತುಮಕೂರಿನ ಸರಕಾರಿ ಪ್ರೌಢ ಶಾಲೆಯಲ್ಲಿ ಓದುತ್ತಿರುವಾಗ ಒಮ್ಮೆ 1927 ರಲ್ಲಿ ಇಡೀ ನಗರ ಪ್ಲೇಗ್ ರೋಗದಿಂದ ಆವರಿಸಿದ್ದ ಕಾರಣ ವಿದ್ಯಾಭ್ಯಾಸಕ್ಕೆ ತೊಂದರೆಯಾಗಿತ್ತು ಶ್ರೀಮಠದಲ್ಲಿ ವಸತಿಗಾಗಿ ಶ್ರೀ ಉದ್ಧಾನ ಶಿವಯೋಗಿಗಳಲ್ಲಿ ಆಶ್ರಯ ಕೋರಿ ಮನವಿ ಸಲ್ಲಿಸಿದರು ಮೊದಲಿಗೆ ಗುರುಗಳು ಕಟುವಾಗಿಯೆ ಸಾಧ್ಯವಿಲ್ಲ ಎಂದರು ಆಗ ಬೇರೆ ವಿಧಿಯಿಲ್ಲದೆ ತುಮಕೂರಿನ ಶೆಟ್ಟಿಹಳ್ಳಿಯ ಅಲ್ಲಿ ಒಂದು ಪುಟ್ಟ ಕೋಣೆ ಪಡೆದು ಶಿವಣ್ಣ ತನ್ನ ವಿದ್ಯಾಭ್ಯಾಸ ಮುಂದುವರಿಸಬೇಕಾಗಿತ್ತು ಪರೀಕ್ಷೆ ಸಮಯ ಬಹಳ ಕಷ್ಟದ ಪರಿಸ್ಥಿತಿ ಆಗಿತ್ತು ಇದನ್ನರಿತು ವರ ಕೊಟ್ಟಂತೆ ಶ್ರೀ ಉದ್ಧಾನ ಶಿವಯೋಗಿಗಳು ಆಶ್ರಯ ಕೊಟ್ಟರು ಆಗ ಶ್ರೀಮಠದಲ್ಲಿ ಶಿವಣ್ಣನವರ ಆಪ್ತಸ್ನೇಹಿತ ಕಾಳಪ್ಪನವರು ಸಹ ಅವರೊಂದಿಗೆ ಆಶ್ರಯ ಪಡೆದರು ಶ್ರೀಮಠದ ಆಗಿನ ಉತ್ತರಾಧಿಕಾರಿಗಳಾಗಿ ಶ್ರೀ ಮರುಳಾರಾಧ್ಯರೂಂದಿಗೂ ಇವರೀರ್ವರಿಗೂ ವಿಶೇಷ ಬಾಂಧವ್ಯ ಪರಸ್ಪರ ಗೌರವ ಬೆಳದಿತ್ತು ತಮ್ಮ ಹೆಚ್ಚಿನ ಶಿಕ್ಷಣಕ್ಕಾಗಿ ಶಿವಣ್ಣನವರು 1930 ಜನವರಿಯಲ್ಲಿ ಭೌತವಿಜ್ಞಾನ ಮತ್ತು ಗಣಿತ ಐಚ್ಚಿಕ ವಿಷಯವಾಗಿ ಆಯ್ಕೆ ಮಾಡಿಕೊಂಡು ಬೆಂಗಳೂರಿನ ಸೆಂಟ್ರಲ್ ಕಾಲೇಜಿನಲ್ಲಿ ಓದುತ್ತಿದ್ದರು ಯಾವ ಆಧುನಿಕ ವಿಲಕ್ಷಣಗಳಿಗೂ ಓಗೊಡದೆ ತಮ್ಮ ಸಾತ್ವಿಕ ಸಂಸ್ಕೃತಿಯನ್ನು ಕಾಪಾಡಿಕೊಂಡೇ ಬೆಂಗಳೂರಿನ ತೋಟದಪ್ಪ ವಿದ್ಯಾರ್ಥಿ ನಿಲಯದಲ್ಲಿ ಓದುತ್ತಿದ್ದರು ಅಲ್ಲಿಯೂ ದಿನವೂ ಬೆಳಗಿನ ಜಾವ 4:00 ಗಂಟೆಗೆ ಶಿವಣ್ಣನ ದಿನಚರಿ ಪ್ರಾರಂಭವಾಗುತ್ತಿತ್ತು ದಿನನಿತ್ಯ ತಣ್ಣೀರಿನ ಸ್ನಾನ, ಶಿವಪೂಜೆ, ಓದು ಯಥಾವತ್ತಾಗಿ ಯಾವ ಅಡೆತಡೆ ಇಲ್ಲದೆ ನಡೆಯುತ್ತಿತ್ತು ಹೀಗಿರುವಾಗ ಅದೇ ವರ್ಷ ಜನವರಿಯ 16ನೇ ತಾರೀಕು ಶ್ರೀ ಮರುಳಾರಾಧ್ಯ ಶಿವ್ಯಕ್ಯರಾದ ಸುದ್ದಿ ಶಿವಣ್ಣನವರಿಗೆ ತಿಳಿಯಿತು. ಸುದ್ದಿ ಕೇಳಿ ದುಃಖಿತರಾದ ಶಿವಣ್ಣನವರು ತಕ್ಷಣವೇ ಸಿದ್ದಗಂಗಾ ಮಠಕ್ಕೆ ಧಾವಿಸಿದರು, ಶ್ರೀ ಮರುಳಾರಾಧ್ಯರ ಸಮಾಧಿ ಕಾರ್ಯ ಮುಗಿಸಿ ಶ್ರೀಗಳ ಪಾದ ಪೂಜೆಯಲ್ಲಿ ತೊಡಗಿದ್ದ ಶಿವಣ್ಣರನ್ನು ಕಂಡ ಭಕ್ತ ಸಮೂಹ ಶಿವಣ್ಣನವರೇ ಮುಂದಿನ ಉತ್ತರಾಧಿಕಾರಿಯಾಗಲು ಸೂಕ್ತ ಎಂದಿದ್ದರು. ಇತ್ತ ಶ್ರೀ ಉದ್ಧಾನ ಶಿವಯೋಗಿಗಳ ಕಣ್ಣುಗಳು ತನ್ನ ಭಾವ ಸಮಾಧಿಯಲ್ಲಿ ಕಂಡಿದ್ದ ಉತ್ತರಾಧಿಕಾರಿಯಾಗಲು ಯೋಗ್ಯವಾದ ಬಾಲ ಶಿವಯೋಗಿಯನ್ನು ಹುಡುಕುತಿದ್ದವು. ಶಿವಣ್ಣನನ್ನು ಕಂಡ ಶಿವಯೋಗಿಗಳು "ಶಿವಣ್ಣ ಶ್ರೀ ಮಠದ ಉತ್ತರಾಧಿಕಾರವನ್ನು ನೀನು ವಹಿಸಿಕೊಳ್ಳಬೇಕು" ಎಂದೊಡನೆ ಮರುಮಾತಿಲ್ಲದೆ ಶಿವಣ್ಣನವರು ಗುರು ಆಜ್ಞೆಯನ್ನು ಒಪ್ಪಿ ಅವರ ಪಾದಗಳಿಗೆ ನಮಸ್ಕರಿಸಿದರು. ಶ್ರೀ ಉದ್ಧಾನ ಶಿವಯೋಗಿಗಳು ಶಕ್ತಿ ಅದ್ಭುತವಾದುದಾಗಿತ್ತು, ಆ ಶಕ್ತಿಯ ಮುಂದೆ ಯಾವ ಆಲೋಚನೆಗಳು ಇರಲು ಸಾಧ್ಯವಾಗಲಿಲ್ಲ.
1930 ನೇ ಇಸವಿ ಮಾರ್ಚ್ ತಿಂಗಳ 3 ನೇ ತಾರೀಖು ಶ್ರೀ ಗೋಸಲ ಸಿದ್ದೇಶ್ವರರಿಂದ ಸಂಸ್ಥಾಪಿತವಾದ, ಮಹಾ ಪರಂಪರೆಯುಳ್ಳ ಶ್ರೀ ಸಿದ್ದಗಂಗಾ ಮಠದಲ್ಲಿ ಸಂತೋಷ ತುಂಬಿತುಳುಕುತ್ತಿತ್ತು. ಏಕೆಂದರೆ ಆ ಶುಭದಿನದಂದು ಶ್ರೀ ಉದ್ಧಾನ ಶಿವಯೋಗಿಗಳು ಶಿವಣ್ಣನವರಿಗೆ ಶ್ರೀ ಶ್ರೀ ಶಿವಕುಮಾರ ಸ್ವಾಮಿಗಳೆಂದು ನಿರಂಜನ ಜಂಗಮಾಧಿಕಾರವನ್ನು ಆಶೀರ್ವದಿಸಿದ್ದರು ಅಂದಿನಿಂದ ಇಂದಿನವರೆಗೆ ಶ್ರೀ ಶಿವಕುಮಾರ ಸ್ವಾಮಿಗಳಿಂದ ಗುರುಗಳ ಇಚ್ಛೆಯಂತೆ ಅನ್ನ ಹಾಗೂ ಜ್ಞಾನ ದಾಸೋಹದ ಜ್ಯೋತಿ ಆರಿಲ್ಲ.
ಹಿಂದಿನ ದಿನಗಳಲ್ಲಿ ಮಠದ ಆದಾಯ ತುಂಬಾ ಕಡಿಮೆ ಇತ್ತು, ಬರುವ ಭಕ್ತರ ಸಂಖ್ಯೆ ಹೆಚ್ಚುತ್ತಿತ್ತು ಹೀಗಿರುವಾಗ 10 ದಿನದಿಂದ ತಿಂಗಳುಗಳವರೆಗೆ ಸ್ವಾಮಿಗಳು ತಮ್ಮ ಹಿರಿಯರ ಪರಂಪರೆಯಂತೆ ಜೋಳಿಗೆ ಹಿಡಿದು ಬೀದಿಬೀದಿ ಸುತ್ತಿ ಮಠದಲ್ಲಿನ ಹಸಿದ ಜೀವಿಗಳಿಗೆ ದಾಸೋಹವನ್ನು ಪೂರೈಸಿದ್ದರು.1917 ರಲ್ಲಿ ಶ್ರೀ ಉದ್ಧಾನ ಶಿವಯೋಗಿಗಳಿಂದ ವಿದ್ಯಾದಾನ ಆರಂಭಗೊಂಡಿತ್ತು. ಮೊದಲಿಗೆ ಸಂಸ್ಕೃತ ಪಾಠಶಾಲೆಯ 53 ವಿದ್ಯಾರ್ಥಿಗಳಿಂದ ಕೂಡಿದಾಗಿ ವಿದ್ಯಾರ್ಥಿಗಳ ಪೋಷಣೆ ದಿನ ನಿತ್ಯ ಬರುವ ಭಕ್ತಾದಿಗಳ ಊಟ, ದೇವಾಲಯಗಳ ಪೂಜಾ ನಿಯಮ ನಿಭಾಯಿಸುವುದು ಅಂದು ಶ್ರೀ ಶಿವಕುಮಾರ ಸ್ವಾಮಿಗಳಿಗೆ ಸುಲಭದ ಮಾತಾಗಿರಲಿಲ್ಲ. ಎಷ್ಟೋ ಬಾರಿ ಬುದ್ಧಿಯವರು ಕೆಲ ಭಕ್ತರು ಪಾದ ಪೂಜೆ, ಶಿವ ಪೂಜೆಗೆ ಆಹ್ವಾನಿಸಿದಾಗ ಹತ್ತಾರು ಮೈಲಿಗಳ ದೂರ ನೆಡೆದೇ ಸಾಗಿದ್ದು ಉಂಟು, ಬಂದ ಆದಾಯದಲ್ಲಿ ನಿಭಾಯಿಸುತ್ತಿದ್ದರು. ಅದೊಂದು ಸಂದರ್ಭ, ಶ್ರೀ ಶಿವಕುಮಾರ ಸ್ವಾಮಿಗಳು ಉತ್ತರಾಧಿಕಾರ ಪಡೆದ ಕೆಲವು ವಾರಗಳಲ್ಲಿ ಶ್ರೀ ಉದ್ಧಾನ ಶಿವಯೋಗಿಗಳ ಶಿವಗಣಾರಾಧನೆ ಮಾಡಬೇಕಿತ್ತು,ಮಠದಲ್ಲಿದ್ದ 300 ರೂಗಳು ಹಾಗೂ ಭಕ್ತರ ಸಹಕಾರದಿಂದ ಕಾರ್ಯವನ್ನು ಮುಗಿಸಿದಗಿತ್ತು, ಮುಂದೇನು ಎಂದು ಶ್ರೀಗಳು ಯೋಚಿಸುತ್ತಿರುವಾಗ ಮಠದ ಭಕ್ತರಾದ ಚಿಕ್ಕಣ್ಣನವರ ಅಂದು ತಟ್ಟನೆ ಬಂದು ಮಠಕ್ಕೆ ಖರ್ಚು ಬಹಳಷ್ಟಿದೆ ಎಂದು ಹೇಳಿ ನಾನು 4000 ರೂಗಳನ್ನು ಕೊಟ್ಟಿದ್ದರು, ಅದರ ಅರ್ಧದಷ್ಟನ್ನು ದಾನ ಮಾಡಿ ಮಿಕ್ಕ ಹಣದಲ್ಲಿ ಶ್ರೀಗಳು ವಿದ್ಯಾ ದಾಸೋಹ, ಅನ್ನದಾಸೋಹವನ್ನು ಮುಂದುವರೆಸಿದರು, ಇದೇ ಶ್ರೀಗಳಿಗೆ ಮೂಲ ಬಂಡವಾಳ ವಾಯಿತು. ಅಂದಿನಿಂದ ಎಷ್ಟು ಭಕ್ತರಿಂದ ಶ್ರೀಮಠಕ್ಕೆ ಧವಸ, ಧಾನ್ಯ, ಕಾಳು, ತರಕಾರಿ, ಹಣದ ಮಹಾಪೂರವೇ ಹರಿದು ಬರುವುದು ಸಾಮಾನ್ಯವಾಯಿತು.
ಕೇವಲ 53 ವಿದ್ಯಾರ್ಥಿಗಳಿಂದ ವಿದ್ಯಾ ದಾಸೋಹ 2007ರಲ್ಲಿ 10,000 ಮೀರಿತು. ಇಂದು ಇದರ ಸಂಖ್ಯೆ 50,000 ಕ್ಕೂ ಹೆಚ್ಚಿದೆ. ಯಾವುದೇ ಜಾತಿ, ಧರ್ಮ, ಜನಾಂಗಗಳನ್ನು ಪರಿಗಣಿಸದೇ ಸದುದ್ದೇಶದಿಂದ ಬಡ ಮಕ್ಕಳ ಶಿಕ್ಷಣ ಕಲಿಕೆಯ ಹಂಬಲಕ್ಕೆ ಶ್ರೀಮಠ ಕೈಬೀಸಿ ಕರೆಯುವ, ಬಾಚಿ ತಬ್ಬುವ ವಿದ್ಯಾ ದೇಗುಲವಾಗಿದೆ. ಶ್ರೀಮಠದ ಶಾಲಾ-ಕಾಲೇಜುಗಳು ಇಡೀ ರಾಜ್ಯದಲ್ಲಿ ವಿದ್ಯೆಯ ಬೆಳಕನ್ನು ಪಸರಿಸುತ್ತವೆ. ಸಾವಿರಾರು ವಿದ್ಯಾರ್ಥಿಗಳು ದೇಶ-ವಿದೇಶಗಳಲ್ಲಿ ಶ್ರೀ ಮಠದ ಕೀರ್ತಿಯನ್ನು ಬೆಳಗಿದ್ದಾರೆ. ಇನ್ನೂ ಶ್ರೀ ಮಠದ ದಾಸೋಹ ಇಂದು ಬಹಳ ಹಿರಿಯದ್ದು, ದಿನಕ್ಕೆ ಸರಾಸರಿ ಹತ್ತು ಸಾವಿರ ಮಂದಿಗೂ ಹೆಚ್ಚು ಬಿಡುವಿಲ್ಲದೆ ಪ್ರಸಾದ ಬಡಿಸುವ ಔದಾರ್ಯ ನಮಗೆ ಕಾಣುತ್ತದೆ. ಇಲ್ಲಿ ಯಾವುದೇ ಭೇದವಿಲ್ಲದೆ ಹಸಿದು ಬಂದವರಿಗೆ ಇಲ್ಲ ಎನ್ನದೆ ಪ್ರಸಾದದ ಸಂತೃಪ್ತಿಯನ್ನು ಕೊಡುವ ಪದ್ಧತಿ ವಿಭಿನ್ನ ಎನಿಸುತ್ತದೆ. ತನ್ನೂಡಲಲ್ಲಿ ಇರುವ ಮಕ್ಕಳಿಗೆ ವಿದ್ಯೆಯ ಜೊತೆಗೆ ಪ್ರಾರ್ಥನಾ ಭಾವ, ಸುಸಂಸ್ಕೃತ ನಡತೆ, ಸಾತ್ವಿಕತೆ, ವೈಚಾರಿಕತೆಗಳನ್ನೂ ನೀಡುತ್ತಿದೆ. ಇಷ್ಟಾದರೂ ನಮ್ಮ ಬುದ್ಧಿಯವರು ಅದೇ ಮುಗ್ಧತೆಯಲ್ಲಿ, ಕಾಯಕ ನಿಷ್ಠೆಯಲ್ಲಿ ಕಾಣಸಿಗುತ್ತಾರೆ. ಏಷ್ಟು ಹೇಳಿದರು ಬರೆದರೂ ಕಡಿಮೆಯೇ ಎಂಬ ಭಾವ ನನಗಿದೆ. ಇದಲ್ಲವೇ ಶ್ರೀ ಸಿದ್ಧಗಂಗೆಯ ವೈಶಿಷ್ಟ್ಯ.......
ಇದನ್ನೇ ಕಂಡು ಇರಬೇಕು ಪೂಜ್ಯ ಶ್ರೀಗಳನ್ನು "ನಡೆದಾಡುವ ದೇವರು" ಎಂದಿದ್ದು, ದೇವರಿಗಿಂತ ದೊಡ್ಡ ಪದ ನಮಗೆ ಎಲ್ಲಿ ಸಿಗಲು ಸಾಧ್ಯ, ಹೌದು ದೇವರು ಇವರು. ನಿಮ್ಮನ್ನು ಕಾಣುತ್ತಿರುವ, ಆಶೀರ್ವಾದದ ನೆಲದಲ್ಲಿರುವ ನಾವು ನಿಜಕ್ಕೂ ಪುಣ್ಯವಂತರು. ಏಕೆಂದರೆ ನಿಮ್ಮ ದಿವ್ಯದೃಷ್ಟಿಯಿಂದಲೇ ಸಕಲ ಕಷ್ಟಗಳು ದೂರವಾಗುತ್ತದೆ, ನಿಮ್ಮಪಾದಸ್ಪರ್ಶದಿಂದ ನವಚೈತನ್ಯ ನವಿರೇಳುತ್ತದೆ. ನಿಮ್ಮನ್ನು ನೆನೆದೊಡನೆ ಎಂಥ ಸೋಮಾರಿತನವಿದ್ದರೂ ಮಾಯವಾಗುತ್ತದೆ ನಿಮ್ಮ ಕಾರ್ಯ- ಕಾಯಕಗಳಲ್ಲಿ ಸನ್ನಧ್ದರಾಗುವ ಹುರುಪು ಮೂಡುತ್ತದೆ, ಇಂದು ಎಂದು ನಮ್ಮ ಶಕ್ತಿ ನೀವಾಗಿರುತ್ತೀರಿ, ನಮ್ಮ ಭಕ್ತಿ ನಿಮಗಾಗಿರುತ್ತದೆ, ನಮ್ಮ ಧ್ಯಾನದಲ್ಲಿ ನೀವಿರುತ್ತೀರಿ, ನಮ್ಮಲ್ಲಿ ನಮ್ಮೆಲ್ಲರ "ಚೈತನ್ಯದ ಚಿಲುಮೆ" ನೀವು... ಕೊನೆಯದಾಗಿ ಮಾನ್ಯ ರಾಷ್ಟ್ರಕವಿ ಡಾ. ಜಿ. ಎಸ್. ಶಿವರುದ್ರಪ್ಪನವರ ಪದ್ಯದ ನನ್ನ ಮೆಚ್ಚಿನ ನಾಲ್ಕು ಸಾಲುಗಳು
"ಸದ್ದು ಗದ್ದಲ ವಿರದ ಸಾಧನೆ ಇಲ್ಲಿ ಗದ್ದುಗೆಯೇರಿದೆ|
ಕಾಯಕವೇ ಕೈಲಾಸವೆನ್ನುವ ಮಾತು ಕೃತಿಯೊಳು ಮೂಡಿದೆ|
ಕಾವಿಯುಡುಗೆಯನುಟ್ಟು ನಭವೇ ಕಿರಣ ಹಸ್ತವ ಚಾಚಿದೆ|
ಎಲ್ಲ ನನ್ನವರೆನುವ ಭಾವದ ಕರುಣೆಯೇ ಕಣ್ತೆರೆದಿದೆ|"
ಧನ್ಯ ಭಾವದಿಂದ ಭಾವಪೂರ್ವಕ ವಂದನೆಗಳು
ಪೃಥ್ವಿ ಎಂ ಎಲ್.