Tuesday, August 31, 2021
*ಸಂಬಂಧಗಳ ಸೆಲೆ*
Saturday, May 22, 2021
ಮಣ್ಣು
ಎಣಿಸೇ ಇರಲಿಲ್ಲ ನಿನ್ನಿಂದ ಹಿಗ್ಗುವೆ ಎಂದು.,
ಎಲ್ಲ ಕಳೆದರು ಹೊಸ ಚೈತನ್ಯವ ತಂದು.,
ಯಾರಿಲ್ಲದಿದ್ದರೂ ನೀ ನನ್ನ ಕಡೆಗೆ ಬಂದು.,
![]() |
ಯಾವ ಓದಿಗೂ ಸಿಗದ ಪುನರುಜ್ಜೀವನ ಇಂದು.,
ಮೊದಲ ಸರಿ ಸಾರ್ಥಕ ಎನಿಸಿದೆ ಮಣ್ಣೇ ನನ್ನ ಹೆಸರೆಂದು..,
ಊಹಿಸದಷ್ಟುಮೇರೆ ಮೀರುವ ಚಂದ ನಿಂದು.,
ತಿಳಿದು ಹೋಯಿತು ಕಡೆಗೆ ಕೈ ಹಿಡಿಯುವ ತಾಯಿ ನೀನೆಂದು...... 🙏❤💞
ಎಲ್ಲಾ ಒತ್ತಡಗಳನ್ನು ದೂರ ನೂಕಿ ಸಿದ್ದವಾದ ಸುಂದರ ಮಣ್ಣಿನ ಒಡವೆಗಳು..... ಹೇಳ ಸಿಗದಷ್ಟು ನೆಮ್ಮದಿ ಎನ್ನಿಸುತಿದೆ, ನನ್ನ ಗೆಳತಿ ಹೇಳಿದಳು ಮಣ್ಣು negetive energy ಹೀರಿ ನಮ್ಮ aura clean ಮಾಡುತ್ತೆ ಅಂತ ನಿಜವೆನೋ ಗೊತಿಲ್ಲ, ಪ್ರಶಾಂತತೆ, ಬಣ್ಣಿಸಲಾಗದ ಸಂತೋಷವಂತು ಸಿಕ್ಕಿದೆ........ 😊
ಪೃಥ್ವಿ. ಎಂ. ಎಲ್.
Saturday, January 23, 2021
ಹಂಸ ಗೀತೆಯ ನಿನಾದ
ಈ ಪುಸ್ತಕದ +point ಅಂದರೆ ಸಂಪೂರ್ಣ ನೈಜತೆಯಂತೆ ಅದರದರ ಭಾವಕ್ಕೆ ತಕ್ಕಂತೆ ಸುಂದರ ಪದ ಪುಂಜಗಳೂಡನೆ ವ್ಯಕ್ತ ಪಡಿಸಿರುವುದು. ಅದರಲ್ಲೂ 7ನೇ ಅಧ್ಯಾಯದಿಂದ ಮುಂದಕ್ಕೆ ಸದಾನಂದ ಬುವಾ – ವೆಂಕಟಸುಬ್ಬಯ್ಯನವರ ಕಠೋರ ಒಡನಾಟ, ಬುವಾ ಹಂಬಲಿಸಿದಂತೆ ಸಂಗೀತ ಗುರುವಾದ ಪರಿ, ಹಂತ ಹಂತವಾಗಿ ಅವರು ಸಂಗೀತ ಸರಸ್ವತಿಯನ್ನು ಒಲಿಸಿಕೊಂಡು ಭೈರವಿ ರಾಗದಲ್ಲಿ ಆಕೆಯನ್ನು ಕಾಣುತ್ತಿದ್ದುದು, ನಂತರ ಭೈರವಿ ಸಂಪೂರ್ಣವಾಗಿ ಅವರಿಗೆ ಒಲಿದು ಬೇರಾರು ಈ ರಾಗವನ್ನು ಅವರಹಾಗೆ ಹಾಡಲಾಗುತ್ತಿರಲಿಲ್ಲ ಎಂದು ಓದುತ್ತಿದ್ದರೆ ಮೈಮರೆತು ಮನಸ್ಸು ಯೋಚಿಸುವಂತಾಗುತ್ತದೆ.
ನನಗೆ ತಿಳಿದಿರುವ ಮಟ್ಟಿಗೆ ಭೈರವಿ ಸಾಮಾನ್ಯ ರಾಗವಲ್ಲ, ಅದರ ನೀಳ, ಮಧುರ ಸ್ವರಗಳ ಪ್ರಶಾಂತತೆಯೂ ಅಷ್ಟೇ, ಮುಗಿಲು ಮುಟ್ಟಿಸುವ, ಶಕ್ತಿ ಸೆಳೆಯುವ ಸ್ವರಗಳ ಭೋರ್ಗರೆಯುವಿಕೆಯೂ ಅಷ್ಟೇ, ಇತ್ತ ಅತ್ಯಂತ ಸಮಾಧಾನಕರ ಆಲಾಪನೆಯಾದರೆ ಅತ್ತ ಅತ್ಯಂತ ಗಂಭೀರ, ಮನೋಹರವಾಗಿ ಘರ್ಜಿಸುತ್ತದೆ. ಎಷ್ಟೋ ಬಾರಿ ನಾನು ನನ್ನ ಗುರುಗಳಾದ ಶ್ರೀಮತಿ ವೀಣಾ ಲೋಕೇಶ್ ಅವರೊಡನೆ ಇದರ ಕುರಿತಾಗಿ ಅಚ್ಚರಿಯಿಂದ ಕೇಳುತ್ತಿದ್ದೆ, ಈ ಸ್ವರಗಳನ್ನ ಅದ್ಹೇಗೆ ಜೋಡಿಸಿದರೋ, ಹೇಗೆ ರಚಿಸಿರಬಹುದು ನನ್ನಂಥವರ ಊಹೆಗೂ ಸಿಗುತ್ತಿರಲಿಲ್ಲ. ಈಗಿರುವಾಗ ನಾನು ಈ ಪುಸ್ತಕದಲ್ಲಿ ಓದಿದೆ ಸಾಕ್ಷಾತ್ ಪೂಜಿಸುವ ತಾಯಿಯೇ ವೆಂಕಟಸುಬ್ಬಯ್ಯನವರು ಹಾಡುತ್ತಿದ್ದರೆ ಪ್ರತ್ಯಕ್ಷವಾಗಿ ನಲಿಯುತ್ತಿದ್ದಳು ಎಂದು ನಿಜವಾಗಿಯೂ ಮೈರೋಮಗಳು ನವಿರೆದ್ದಂತಾಯಿತು. ಕೊನೆಯ ಅಧ್ಯಾಯಗಳಲ್ಲಿ ಈ ಮಹಾನ್ ಪುರುಷ ದೇವರ ಮುಂದೆ ಬಿಟ್ಟು ಟಿಪ್ಪು ಸುಲ್ತಾನನ ಮುಂದೆ ಹಾಡುವುದಿಲ್ಲ, ನನ್ನ ಸಂಗೀತ ಸರಸ್ವತಿಯನ್ನು, ನನ್ನ ತಾಯಿಯನ್ನು ಸುಲ್ತಾನನ ಭೋಗಕ್ಕೆ ದಾಸರನ್ನಾಗಿ ಮಾಡಲಾರೆ ಎಂದು ಹಠಮಾಡಿ ತನ್ನ ದೈವ ದೀಕ್ಷೆಯನ್ನು ಉಳಿಸಿಕೊಳ್ಳಲು ತನ್ನ ನಾಲಗೆಯನ್ನು ತಾವೇ ಕತ್ತರಿಸಿಕೊಂಡದ್ದು ಎಂಥವರಿಗೂ ಕಣ್ಣಲ್ಲಿ ನೀರಾಡಿಸುತ್ತದೆ. ಕೊನೆಗೆ ಇವರ ಮನೋಬಲ, ಸಂಗೀತ ಕೌಶಲ್ಯತೆಗೆ ಟಿಪ್ಪುವೂ ಮನಸಾರೆ ಮೆಚ್ಚಿಕೊಂಡ, ಗೌರವ ಕೊಟ್ಟ ಅಷ್ಟರಲ್ಲಿ ಹಾಡಲು ನಾಲಗೆಯೇ ಉಳಿದಿರಲಿಲ್ಲ. ಇದನ್ನು ಕಂಡಾಗ ನನಗನ್ನಿಸಿತು ನಾವು ಈಗಿನ ಪೀಳಿಗೆಯವರು ಸಂಗೀತವನ್ನು ಎಂಥೆಂಥ ವಿಚಿತ್ರ ರೀತಿಯಲ್ಲಿ ಬಳಸುತ್ತಿದ್ದೇವೆ, ಅದರ ಸಾರ್ಥಕತೆಯ ಮಹತ್ವವೇ ನಮಗೆ ತಿಳಿದಿಲ್ಲವೇ? ಎಂದು ಕೊರಗಾಯಿತು..
ಮುಖ್ಯವಾಗಿ ಈ ಪುಸ್ತಕದಲ್ಲಿ ವಿವರಿಸಿರುವ ಆಧ್ಯಾತ್ಮಿಕತೆ, ಅದ್ವೈತ ಬಹು ಸರಳವೂ, ಆಳ ತತ್ವಗಳದ್ದಾಗಿವೆ ಅದರ ಅರ್ಥ ತಿಳಿದಾಗ ಸಂತೋಷವಾಗುತ್ತದೆ. ಇದೇ ಥರನಾದ ನನ್ನ ಗಮನ ಸೆಳೆದ ಉದಾಹರಣೆಯನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು ಬಯಸುತ್ತೇನೆ, ಒಮ್ಮೆ ವೆಂಕಟಸುಬ್ಬಯ್ಯನವರು ತಮ್ಮ ಕೋಣೆಯ ಕನ್ನಡಿಯ ಎದುರಿಗೆ ನಿಂತು ತಮ್ಮ ಪ್ರತಿಬಿಂಬವನ್ನು ನೋಡಿಕೊಳ್ಳುತ್ತಿದ್ದರೆ ಇನ್ನೊಂದು ಕನ್ನಡಿಯಲ್ಲಿ ಸ್ವಲ್ಪ ಓರೆಯಾಗಿ ಅವರೇ ಕಾಣುತ್ತಿದ್ದದು ಕಂಡಿತು, ತಕ್ಷಣ ಅವರ ಮನಸ್ಸಿಗೆ ಬಂದಿದ್ದು ಏನು ಗೊತ್ತೇ? ಹೀಗೆ ಇರಬಹುದು ದೇವರು ಒಬ್ಬನೇ ಅವನನ್ನು ನಾವು ಬೇರೆ ಕನ್ನಡಿಗಳ ಬಿಂಬಗಳಲ್ಲಿ ಬೇರೆ ಬೇರೆಯಾಗಿ ನೋಡುತ್ತಿದ್ದೇವೆ ಎಂದು, ಅದೆಷ್ಟು ಉದಾರವಾದ ಆಲೋಚನೆ ಅದೆಷ್ಟು ಸರಳವಾಗಿ ಅರ್ಥವಾಗುತ್ತಿದೆ ಎನ್ನಿಸಿತು. ಕೆಲವು ವಾಕ್ಯಗಳಂತೂ ನನಗೆ ಬಹಳ ಇಷ್ಟವಾಗಿವೆ, ನಿಮಗೂ ಅವು ಧನ್ಯ ಭಾವ ಕೊಡಬಹುದು,
ಸದಾನಂದ ಬುವಾ (ವೆಂಕಟಸುಬ್ಬಯ್ಯನವರ ಗುರುಗಳು) ಹೇಳುವಂತೆ,
*ವೇದಾಂತವೂ ಅದೇ, ನಾದಾಂತವೂ ಅದೇ, ವಿಚಾರದ ಹಾದಿಯಲ್ಲಿ ನಡೆದರೆ ವೇದಾಂತ, ಹಾಡಿನ ದಾರಿಯಲ್ಲಿ ನಡೆದರೆ ನಾದಾಂತ. ಎಲ್ಲದರ ಗುರಿಯೂ ಒಂದೇ ಸಾಕ್ಷಾತ್ಕಾರ.. ವೇದಬ್ರಹ್ಮ ನಾದಬ್ರಹ್ಮ ಎರಡೂ ಒಂದೇ ಬೇರೆಯಲ್ಲ, ಉಪಾಸನಮಾರ್ಗ ಬೇರೆ, ಸಿದ್ದಿ ಒಂದೇ..
*ಓಂಕಾರವೇ ಪ್ರಣವ, ಅ ಉ ಅಂ ಸೇರಿ ಓಂಕಾರ, ಸಾ ಪಾ ಸಾ ಸೇರಿದರೂ ಓಂಕಾರವೇ. ಅಕ್ಷರದಲ್ಲಿ ಅ ಉ ಅಂ, ನಾದದಲ್ಲಿ ಸಾ ಪಾ ಸಾ..
ಬಡ ಸಂನ್ಯಾಸಿ ಹೇಳುತ್ತಾರೆ,
*ಮನುಷ್ಯನಿಗೆ ಅವನ ಅಹಂಕಾರವೇ ಪರಮ ವೈರಿ. ಅಹಂಕಾರ ಭಂಗವಾದಾಗ ಅದು ತನ್ನೊಂದಿಗೆ ಇರುವವನನ್ನೂ ಮುರಿಯಲೆತ್ನಿಸುತ್ತದೆ, ಅದಕ್ಕೆ ಬಾಗದೆ, ತಾನಾಗಿ ಮುರಿದ ಅದನ್ನು ಪೂರಾ ಗೆದ್ದು ನಿಲ್ಲುವುದು ಪುರುಷಲಕ್ಷಣ, ಅಹಂಕಾರ ಒಂದು ಜಾಡ್ಯ, ಆತ್ಮನಾಶಿ ರೋಗ.
*ಪ್ರಣವ ಸ್ವರೂಪವಾದ ಭಗವಂತನನ್ನು ನಾದೋಪಾಸನೆಯಿಂದ ಸಾಧಿಸಬಹುದು. ಒಂದೊಂದು ರಾಗವೂ ದೇವತೆಯನ್ನು ಒಲಿಸಿಕೊಳ್ಳುವ ದಿವ್ಯ ಮಂತ್ರ..
ಹೀಗೆ ಅದೇಷ್ಟೋ ಮನಸೆಳೆವ ವಾಕ್ಯಗಳು. ತಮ್ಮ ಅಪೂರ್ವ ಜೀವನವನ್ನು ಸಂಪೂರ್ಣವಾಗಿ ಸಂಗೀತಕ್ಕೆ ಮುಡಿಪಿಟ್ಟುಕೊಂಡು ಎಷ್ಟೋ ಚಂಚಲತೆಗಳನ್ನು ದಾಟಿ ಸಾಧಿಸಿ ಭೈರವಿಯನ್ನು ಒಲಿಸಿಕೊಂಡಿದ್ದರು ಕೊನೆಗೆ ನಾಲಗೆಯನ್ನು ಆ ತಾಯಿಗೆ ಒಪ್ಪಿಸಿಬಿಟ್ಟರು. ಆ ತಾಯಿಯ ಸಾನಿಧ್ಯದಲ್ಲಿಯೇ ಅಮರರಾಗಿ ಹೋದರು. ಈ ನಡುವೆ ಕರುಳು ಕಿವುಚಿದಂತಾಗಿದ್ದು ಅವರ ನಂತರದ ಕಾಲದಲ್ಲಿ ಈ ಮಹಾನ್ ಸಂಗೀತಗಾರನ ವಂಶಸ್ಥರ ದಾರಿದ್ರ್ಯ, ಅವರ ಬೆಲೆಯನ್ನು ತಿಳಿಯದ ಜನ, ಅವರ ವರ್ತನೆಗಳು. ಪುಸ್ತಕವಂತೂ ಅದ್ಬುತ ಓದುವವರ ಪರಿಶ್ರಮ ಸಾರ್ಥಕತೆಯನ್ನ ಹೊಮ್ಮಿಸುತ್ತದೆ ಎನ್ನುವುದರಲ್ಲಿ ಎರಡು ಮಾತಿಲ್ಲ….
ವಂದನೆಗಳೊಂದಿಗೆ
ಪೃಥ್ವಿ. ಎಂ ಎಲ್