Tuesday, August 31, 2021

*ಸಂಬಂಧಗಳ ಸೆಲೆ*

ಸಾಮಾನ್ಯವಾಗಿ ಸಂಬಂಧಗಳು ಅಂದ್ರೆ ನಮಗೆ ಎಷ್ಟೋ ಮುಖಗಳು ನೆನಪಾಗುತ್ತೆ, ಅವುಗಳಲ್ಲಿ ಒಂದಿಷ್ಟು ಸಿಹಿ ಅನ್ಸಿದ್ರೆ, ಒಂದಿಷ್ಟು ಕಹಿ, ಇನ್ನು ಕೆಲವು ಮಿಶ್ರ ಭಾವ ತರಬಹುದು. ನನಗನ್ನಿಸೋ ಮಟ್ಟಿಗೆ ಸಂಬಂಧ ಅಂದ್ರೆ ರಕ್ತ ಸಂಬಂಧಿಗಳೇ ಆಗಬೇಕು ಅಂತಿಲ್ಲ, ಯಾರು ನಮ್ಮ ಭಾವಕ್ಕೆ ತಕ್ಕಂತೆ ವಿಶ್ವಾಸ ಪೂರ್ವಕವಾಗಿ, ಯಾವುದೇ ಅಪೇಕ್ಷೆ ಒಡ್ಡದೆ, ಸದ್ಭಾವದಿಂದ ವರ್ತಿಸುವರೋ ಆ ಕ್ಷಣಕ್ಕೆ ಅವರೇ ಕಾಣುವ ದೇವರೇನೋ..... ಆಶ್ಚರ್ಯ ಅನ್ನಿಸೋ ರೀತಿಯಲ್ಲಿ ಎಷ್ಟೋ ಜನರನ್ನು ನಾವು ತುಂಬ ಅಚ್ಕೋತಿವಿ, ಇಷ್ಟ ಪಡ್ತಿವಿ most of the time ಇವರು ಜನ್ಮಕ್ಕೆ ಅಂಟಿದವರಲ್ಲ ನಮ್ಮ ಭಾವಕ್ಕೆ, ಭಾವನೆ - ಬವಣೆಗೆ ಅಂಟಿದವರು. And it was wondering ಈ ಜನ ನಮಗೆ ಹೇಗೆ ಇಷ್ಟ ಆಗ್ತಾರೆ, ಅವರ ಮಾತುಗಳು ಮಾತ್ರ ಅಲ್ಲ ಅವರ presence ಸಾಕು ನಮಗೆ ಖುಷಿ ಅನ್ಸತ್ತೆ, ಮನಸ್ಸು ಕುಪ್ಪಳಿಸುತ್ತೆ ಹೌದಲ್ವಾ???. ನಿಜ ದೇವರು ಮಾಡಿಟ್ಟಿದ್ದಾನೆ response ಅನ್ನೋ ರಾಸಾಯನಿಕನ,. ನಾವೇನಾದ್ರು ಒಬ್ಬರನ್ನ ಇಷ್ಟ ಪಟ್ಟರೆ ನಮ್ಮ ಮೆದುಳು Dopamine ನ release ಮಾಡುತ್ತೆ ಅದರ ಹಿಂದೇನೆ Serotonin, Oxytocin production ಜಾಸ್ತಿ ಆಗುತ್ತಂತೆ so we feel a surge of positive emotions. ನಮಗೆ ಗೊತ್ತೇ ಇದೆ ಈ ಮೂರು common ಆಗಿ Happy Hormone's ಅನ್ನಿಸಿಕೊಳ್ಳುತ್ತಿವೆ.. ಅದಕ್ಕೆ ಯಾರುನ್ನದ್ರೂ, ಏನ್ನನಾದ್ರು ಇಷ್ಟ ಪಟ್ರೆ ಖುಷಿ ಇರತ್ತೆ ಮನಸ್ಸಿಗೆ.. My young freinds, ವ್ಯಕ್ತಿಗಳನ್ನ ನೋಡಿ ಇಷ್ಟ ಪಡೋದಕ್ಕಿಂತ ವ್ಯಕ್ತಿತ್ವ ನೋಡಿ ಇಷ್ಟ ಪಡೋದು ಸೂಕ್ತ ಯಾಕಂದ್ರೆ ಅವರ ಸ್ಪಂದನೆ ಮೇಲೆ ಸರ್ವೇ ಸಾಮಾನ್ಯವಾಗಿ ನಮ್ಮ ಖುಷಿ depend ಆಗಿರತ್ತೆ,. Best ಅಂದ್ರೆ ನಮ್ಮ ನಮ್ಮ mentality ಗೆ ಸದಾ ಖುಷಿ ಕೊಡೋದುನ್ನ ನೋಡಿ ಇಷ್ಟ ಪಟ್ರೆ ಬಹಳ ಚಂದ, it may be any work, nature or any thing which must heals our aura.. ಅದಕ್ಕೆ ಏನೊ ನಮ್ಮನ್ನು ಸಂಗ ಜೀವಿ ಅನ್ನೋದು. ಇಂಥ ಖುಷಿ ತುಂಬೋ ಎಷ್ಟೋ ಜನ ನಮಗಾಗಿ ಇರತ್ತಾರೆ, I just hats of them..... ಧನ್ಯವಾದಗಳೊಂದಿಗೆ, ಡಾ.ಪೃಥ್ವಿ.ಎಂ ಎಲ್.

Saturday, May 22, 2021

ಮಣ್ಣು

 ಎಣಿಸೇ ಇರಲಿಲ್ಲ ನಿನ್ನಿಂದ ಹಿಗ್ಗುವೆ ಎಂದು.,

ಎಲ್ಲ ಕಳೆದರು ಹೊಸ ಚೈತನ್ಯವ ತಂದು.,

ಯಾರಿಲ್ಲದಿದ್ದರೂ ನೀ ನನ್ನ ಕಡೆಗೆ ಬಂದು.,


ಯಾವ ಓದಿಗೂ ಸಿಗದ ಪುನರುಜ್ಜೀವನ ಇಂದು.,

ಮೊದಲ ಸರಿ ಸಾರ್ಥಕ ಎನಿಸಿದೆ ಮಣ್ಣೇ ನನ್ನ ಹೆಸರೆಂದು..,

ಊಹಿಸದಷ್ಟುಮೇರೆ ಮೀರುವ ಚಂದ ನಿಂದು.,

ತಿಳಿದು ಹೋಯಿತು ಕಡೆಗೆ ಕೈ ಹಿಡಿಯುವ ತಾಯಿ ನೀನೆಂದು...... 🙏❤💞


ಎಲ್ಲಾ ಒತ್ತಡಗಳನ್ನು ದೂರ ನೂಕಿ ಸಿದ್ದವಾದ ಸುಂದರ ಮಣ್ಣಿನ ಒಡವೆಗಳು..... ಹೇಳ ಸಿಗದಷ್ಟು ನೆಮ್ಮದಿ ಎನ್ನಿಸುತಿದೆ, ನನ್ನ ಗೆಳತಿ ಹೇಳಿದಳು ಮಣ್ಣು negetive energy ಹೀರಿ ನಮ್ಮ aura clean  ಮಾಡುತ್ತೆ ಅಂತ ನಿಜವೆನೋ ಗೊತಿಲ್ಲ, ಪ್ರಶಾಂತತೆ, ಬಣ್ಣಿಸಲಾಗದ ಸಂತೋಷವಂತು ಸಿಕ್ಕಿದೆ........ 😊

ಪೃಥ್ವಿ. ಎಂ. ಎಲ್.

Saturday, January 23, 2021

ಹಂಸ ಗೀತೆಯ ನಿನಾದ



ಹಂಸ ಗೀತೆ  ತ.ರಾ.ಸು ಅವರ ಚಿತ್ರದುರ್ಗದ ಕುರಿತಾದ ಸರಣಿ ಕೃತಿಗಳಲ್ಲಿ ಒಂದಾದ ಶಾಸ್ತ್ರೀಯ ಸಂಗೀತ ಸಾಧಕರ ಬಗೆಗಿನ ಪುಸ್ತಕ. ದುರ್ಗಾಸ್ತಮಾನ ಪುಸ್ತಕವನ್ನು ಓದಿದ್ದ  ನನಗೆ ಹಂಸ ಗೀತೆಯನ್ನು ಓದುವ ಮನಸ್ಸಾಗಿ ಓದಲು ಶುರು ಮಾಡಿದೆ. ಈ ಪುಸ್ತಕವು ಮಹಾನ್ ಸಂಗೀತಗಾರರ ಕುರಿತಾದ ಪುಸ್ತಕ ಎಂದು ತಿಳಿದ ನನಗೆ ಪುಸ್ತಕ ಬಿಡುವ ಮನಸೇ ಆಗಲಿಲ್ಲ. ತ. ರಾ. ಸು  ರವರ ಉದಾಹರಣೆಗಳು, ವರ್ಣನೆಗಳು ಹೇಳ ತೀರದಷ್ಟು ಅಗಮ್ಯ ಎಂಬುದು ನಮ್ಮೆಲ್ಲರಿಗೂ ತಿಳಿದ ವಿಷಯವೇ ಆದರೂ, ಈ ಪುಸ್ತಕದಲ್ಲಿ ಅವರು ಭೈರವಿ ವೆಂಕಟಸುಬ್ಬಯ್ಯನವರ ಪ್ರತಿ ಜೀವನ ಘಟ್ಟಗಳನ್ನು ವಿವರಿಸಿರುವ ರೀತಿ ಓದುಗರಿಗೆ ಮಂತ್ರ ಮುಗ್ದರನ್ನಾಗಿ ಮಾಡುತ್ತದೆ. 13-14 ವರ್ಷಗಳಿಂದ ಕರ್ನಾಟಕ ಶಾಸ್ತ್ರೀಯ ಸಂಗೀತದ ಸಂಬಂಧದಲ್ಲಿರುವ ನನಗೆ ಈ ಪುಸ್ತಕದಿಂದಲೇ ತಿಳಿದಿದ್ದು ಒಂದು ರಾಗವನ್ನು ದೈವದಂತೆ ಕಂಡು ಅದನ್ನು ಒಲಿಸಿಕೊಳ್ಳಲೂ ಬಹುದು, ಹಾಗೇ ವೆಂಕಟಸುಬ್ಬಯ್ಯ ಭೈರವಿ ವೆಂಕಟಸುಬ್ಬಯ್ಯ ಎಂದು ಖ್ಯಾತಿ ಪಡೆದಿದ್ದರು.

ಈ ಪುಸ್ತಕದ +point  ಅಂದರೆ ಸಂಪೂರ್ಣ ನೈಜತೆಯಂತೆ  ಅದರದರ ಭಾವಕ್ಕೆ ತಕ್ಕಂತೆ ಸುಂದರ ಪದ ಪುಂಜಗಳೂಡನೆ ವ್ಯಕ್ತ ಪಡಿಸಿರುವುದು. ಅದರಲ್ಲೂ 7ನೇ ಅಧ್ಯಾಯದಿಂದ ಮುಂದಕ್ಕೆ ಸದಾನಂದ ಬುವಾ – ವೆಂಕಟಸುಬ್ಬಯ್ಯನವರ ಕಠೋರ ಒಡನಾಟ, ಬುವಾ ಹಂಬಲಿಸಿದಂತೆ ಸಂಗೀತ ಗುರುವಾದ ಪರಿ, ಹಂತ ಹಂತವಾಗಿ ಅವರು ಸಂಗೀತ ಸರಸ್ವತಿಯನ್ನು ಒಲಿಸಿಕೊಂಡು ಭೈರವಿ ರಾಗದಲ್ಲಿ ಆಕೆಯನ್ನು ಕಾಣುತ್ತಿದ್ದುದು, ನಂತರ ಭೈರವಿ ಸಂಪೂರ್ಣವಾಗಿ ಅವರಿಗೆ ಒಲಿದು ಬೇರಾರು ಈ ರಾಗವನ್ನು ಅವರಹಾಗೆ ಹಾಡಲಾಗುತ್ತಿರಲಿಲ್ಲ ಎಂದು ಓದುತ್ತಿದ್ದರೆ ಮೈಮರೆತು ಮನಸ್ಸು ಯೋಚಿಸುವಂತಾಗುತ್ತದೆ.

ನನಗೆ ತಿಳಿದಿರುವ ಮಟ್ಟಿಗೆ ಭೈರವಿ ಸಾಮಾನ್ಯ ರಾಗವಲ್ಲ, ಅದರ ನೀಳ, ಮಧುರ ಸ್ವರಗಳ ಪ್ರಶಾಂತತೆಯೂ ಅಷ್ಟೇ, ಮುಗಿಲು ಮುಟ್ಟಿಸುವ, ಶಕ್ತಿ ಸೆಳೆಯುವ ಸ್ವರಗಳ ಭೋರ್ಗರೆಯುವಿಕೆಯೂ ಅಷ್ಟೇ, ಇತ್ತ ಅತ್ಯಂತ ಸಮಾಧಾನಕರ ಆಲಾಪನೆಯಾದರೆ ಅತ್ತ ಅತ್ಯಂತ ಗಂಭೀರ, ಮನೋಹರವಾಗಿ ಘರ್ಜಿಸುತ್ತದೆ. ಎಷ್ಟೋ ಬಾರಿ ನಾನು ನನ್ನ ಗುರುಗಳಾದ ಶ್ರೀಮತಿ ವೀಣಾ ಲೋಕೇಶ್ ಅವರೊಡನೆ ಇದರ ಕುರಿತಾಗಿ ಅಚ್ಚರಿಯಿಂದ ಕೇಳುತ್ತಿದ್ದೆ, ಈ ಸ್ವರಗಳನ್ನ ಅದ್ಹೇಗೆ ಜೋಡಿಸಿದರೋ, ಹೇಗೆ ರಚಿಸಿರಬಹುದು  ನನ್ನಂಥವರ ಊಹೆಗೂ ಸಿಗುತ್ತಿರಲಿಲ್ಲ. ಈಗಿರುವಾಗ ನಾನು ಈ ಪುಸ್ತಕದಲ್ಲಿ ಓದಿದೆ ಸಾಕ್ಷಾತ್ ಪೂಜಿಸುವ ತಾಯಿಯೇ ವೆಂಕಟಸುಬ್ಬಯ್ಯನವರು ಹಾಡುತ್ತಿದ್ದರೆ ಪ್ರತ್ಯಕ್ಷವಾಗಿ ನಲಿಯುತ್ತಿದ್ದಳು ಎಂದು ನಿಜವಾಗಿಯೂ ಮೈರೋಮಗಳು  ನವಿರೆದ್ದಂತಾಯಿತು. ಕೊನೆಯ ಅಧ್ಯಾಯಗಳಲ್ಲಿ ಈ ಮಹಾನ್ ಪುರುಷ ದೇವರ ಮುಂದೆ ಬಿಟ್ಟು ಟಿಪ್ಪು ಸುಲ್ತಾನನ ಮುಂದೆ ಹಾಡುವುದಿಲ್ಲ, ನನ್ನ ಸಂಗೀತ ಸರಸ್ವತಿಯನ್ನು, ನನ್ನ ತಾಯಿಯನ್ನು ಸುಲ್ತಾನನ ಭೋಗಕ್ಕೆ ದಾಸರನ್ನಾಗಿ ಮಾಡಲಾರೆ ಎಂದು ಹಠಮಾಡಿ ತನ್ನ ದೈವ ದೀಕ್ಷೆಯನ್ನು ಉಳಿಸಿಕೊಳ್ಳಲು ತನ್ನ ನಾಲಗೆಯನ್ನು ತಾವೇ ಕತ್ತರಿಸಿಕೊಂಡದ್ದು ಎಂಥವರಿಗೂ ಕಣ್ಣಲ್ಲಿ ನೀರಾಡಿಸುತ್ತದೆ. ಕೊನೆಗೆ ಇವರ ಮನೋಬಲ, ಸಂಗೀತ ಕೌಶಲ್ಯತೆಗೆ ಟಿಪ್ಪುವೂ ಮನಸಾರೆ ಮೆಚ್ಚಿಕೊಂಡ, ಗೌರವ ಕೊಟ್ಟ ಅಷ್ಟರಲ್ಲಿ ಹಾಡಲು ನಾಲಗೆಯೇ ಉಳಿದಿರಲಿಲ್ಲ. ಇದನ್ನು ಕಂಡಾಗ ನನಗನ್ನಿಸಿತು ನಾವು ಈಗಿನ ಪೀಳಿಗೆಯವರು ಸಂಗೀತವನ್ನು ಎಂಥೆಂಥ ವಿಚಿತ್ರ ರೀತಿಯಲ್ಲಿ ಬಳಸುತ್ತಿದ್ದೇವೆ, ಅದರ ಸಾರ್ಥಕತೆಯ ಮಹತ್ವವೇ ನಮಗೆ ತಿಳಿದಿಲ್ಲವೇ? ಎಂದು ಕೊರಗಾಯಿತು..

ಮುಖ್ಯವಾಗಿ ಈ ಪುಸ್ತಕದಲ್ಲಿ ವಿವರಿಸಿರುವ ಆಧ್ಯಾತ್ಮಿಕತೆ, ಅದ್ವೈತ ಬಹು ಸರಳವೂ, ಆಳ ತತ್ವಗಳದ್ದಾಗಿವೆ  ಅದರ ಅರ್ಥ ತಿಳಿದಾಗ  ಸಂತೋಷವಾಗುತ್ತದೆ. ಇದೇ ಥರನಾದ ನನ್ನ ಗಮನ ಸೆಳೆದ ಉದಾಹರಣೆಯನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು ಬಯಸುತ್ತೇನೆ, ಒಮ್ಮೆ ವೆಂಕಟಸುಬ್ಬಯ್ಯನವರು ತಮ್ಮ ಕೋಣೆಯ ಕನ್ನಡಿಯ ಎದುರಿಗೆ ನಿಂತು ತಮ್ಮ ಪ್ರತಿಬಿಂಬವನ್ನು ನೋಡಿಕೊಳ್ಳುತ್ತಿದ್ದರೆ ಇನ್ನೊಂದು  ಕನ್ನಡಿಯಲ್ಲಿ ಸ್ವಲ್ಪ ಓರೆಯಾಗಿ ಅವರೇ ಕಾಣುತ್ತಿದ್ದದು ಕಂಡಿತು, ತಕ್ಷಣ ಅವರ ಮನಸ್ಸಿಗೆ ಬಂದಿದ್ದು ಏನು ಗೊತ್ತೇ? ಹೀಗೆ ಇರಬಹುದು ದೇವರು ಒಬ್ಬನೇ ಅವನನ್ನು ನಾವು ಬೇರೆ ಕನ್ನಡಿಗಳ ಬಿಂಬಗಳಲ್ಲಿ ಬೇರೆ ಬೇರೆಯಾಗಿ ನೋಡುತ್ತಿದ್ದೇವೆ ಎಂದು, ಅದೆಷ್ಟು ಉದಾರವಾದ ಆಲೋಚನೆ ಅದೆಷ್ಟು ಸರಳವಾಗಿ ಅರ್ಥವಾಗುತ್ತಿದೆ  ಎನ್ನಿಸಿತು. ಕೆಲವು ವಾಕ್ಯಗಳಂತೂ  ನನಗೆ ಬಹಳ ಇಷ್ಟವಾಗಿವೆ, ನಿಮಗೂ ಅವು ಧನ್ಯ ಭಾವ ಕೊಡಬಹುದು,

ಸದಾನಂದ ಬುವಾ (ವೆಂಕಟಸುಬ್ಬಯ್ಯನವರ ಗುರುಗಳು) ಹೇಳುವಂತೆ,

*ವೇದಾಂತವೂ ಅದೇ, ನಾದಾಂತವೂ ಅದೇ, ವಿಚಾರದ ಹಾದಿಯಲ್ಲಿ ನಡೆದರೆ ವೇದಾಂತ, ಹಾಡಿನ ದಾರಿಯಲ್ಲಿ ನಡೆದರೆ ನಾದಾಂತ. ಎಲ್ಲದರ ಗುರಿಯೂ ಒಂದೇ ಸಾಕ್ಷಾತ್ಕಾರ.. ವೇದಬ್ರಹ್ಮ ನಾದಬ್ರಹ್ಮ ಎರಡೂ ಒಂದೇ ಬೇರೆಯಲ್ಲ, ಉಪಾಸನಮಾರ್ಗ ಬೇರೆ, ಸಿದ್ದಿ ಒಂದೇ..

*ಓಂಕಾರವೇ ಪ್ರಣವ, ಅ ಉ ಅಂ ಸೇರಿ ಓಂಕಾರ, ಸಾ ಪಾ ಸಾ ಸೇರಿದರೂ ಓಂಕಾರವೇ. ಅಕ್ಷರದಲ್ಲಿ ಅ ಉ ಅಂ, ನಾದದಲ್ಲಿ ಸಾ ಪಾ ಸಾ..

ಬಡ ಸಂನ್ಯಾಸಿ ಹೇಳುತ್ತಾರೆ,

*ಮನುಷ್ಯನಿಗೆ ಅವನ ಅಹಂಕಾರವೇ ಪರಮ ವೈರಿ. ಅಹಂಕಾರ ಭಂಗವಾದಾಗ  ಅದು ತನ್ನೊಂದಿಗೆ ಇರುವವನನ್ನೂ ಮುರಿಯಲೆತ್ನಿಸುತ್ತದೆ, ಅದಕ್ಕೆ ಬಾಗದೆ, ತಾನಾಗಿ ಮುರಿದ ಅದನ್ನು ಪೂರಾ ಗೆದ್ದು ನಿಲ್ಲುವುದು ಪುರುಷಲಕ್ಷಣ, ಅಹಂಕಾರ ಒಂದು ಜಾಡ್ಯ, ಆತ್ಮನಾಶಿ ರೋಗ.

*ಪ್ರಣವ ಸ್ವರೂಪವಾದ ಭಗವಂತನನ್ನು ನಾದೋಪಾಸನೆಯಿಂದ ಸಾಧಿಸಬಹುದು. ಒಂದೊಂದು ರಾಗವೂ ದೇವತೆಯನ್ನು ಒಲಿಸಿಕೊಳ್ಳುವ ದಿವ್ಯ ಮಂತ್ರ..

ಹೀಗೆ ಅದೇಷ್ಟೋ ಮನಸೆಳೆವ ವಾಕ್ಯಗಳು. ತಮ್ಮ ಅಪೂರ್ವ ಜೀವನವನ್ನು ಸಂಪೂರ್ಣವಾಗಿ ಸಂಗೀತಕ್ಕೆ ಮುಡಿಪಿಟ್ಟುಕೊಂಡು ಎಷ್ಟೋ ಚಂಚಲತೆಗಳನ್ನು ದಾಟಿ ಸಾಧಿಸಿ ಭೈರವಿಯನ್ನು ಒಲಿಸಿಕೊಂಡಿದ್ದರು ಕೊನೆಗೆ ನಾಲಗೆಯನ್ನು ಆ ತಾಯಿಗೆ ಒಪ್ಪಿಸಿಬಿಟ್ಟರು. ಆ ತಾಯಿಯ ಸಾನಿಧ್ಯದಲ್ಲಿಯೇ ಅಮರರಾಗಿ ಹೋದರು. ಈ ನಡುವೆ ಕರುಳು ಕಿವುಚಿದಂತಾಗಿದ್ದು ಅವರ ನಂತರದ ಕಾಲದಲ್ಲಿ ಈ ಮಹಾನ್ ಸಂಗೀತಗಾರನ ವಂಶಸ್ಥರ ದಾರಿದ್ರ್ಯ, ಅವರ ಬೆಲೆಯನ್ನು ತಿಳಿಯದ ಜನ, ಅವರ ವರ್ತನೆಗಳು. ಪುಸ್ತಕವಂತೂ ಅದ್ಬುತ ಓದುವವರ ಪರಿಶ್ರಮ ಸಾರ್ಥಕತೆಯನ್ನ ಹೊಮ್ಮಿಸುತ್ತದೆ ಎನ್ನುವುದರಲ್ಲಿ ಎರಡು ಮಾತಿಲ್ಲ….

 ವಂದನೆಗಳೊಂದಿಗೆ 

ಪೃಥ್ವಿ. ಎಂ ಎಲ್